ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್ ಸಿದ್ಧ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-12-12 18:22 GMT

ಬೆಂಗಳೂರು, ಡಿ.12: ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಮಗ್ರ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದನ್ನು ‘ಸುಶಾಸನ ದಿನ'ವಾದ ಡಿ.25ರಂದು ಉದ್ಘಾಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೋಮವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಎಂಜಿನಿಯರಿಂಗ್ ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಬೋಧಕರೊಂದಿಗೆ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆದಷ್ಟೂ ಮಟ್ಟಿಗೆ ನ್ಯಾಯಾಲಯದ ಹೊರಗೆಯೇ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಪೆÇೀರ್ಟಲ್ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಸರಳ ಮತ್ತು ಪಾರದರ್ಶಕ ರೀತಿಯಲ್ಲಿ ಕುಂದು ಕೊರತೆಗಳನ್ನು ಆಲಿಸಿ, ಪಿಂಚಣಿ, ಬಡ್ತಿ, ನಿಯೋಜನೆ, ವರ್ಗಾವಣೆ ಮುಂತಾದ ವಿಚಾರಗಳನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣದ ಹಂತದಲ್ಲಿ ಎನ್‍ಇಪಿಯಲ್ಲಿ ಅವಕಾಶವಿರುವ ‘ಓಪನ್ ಎಲೆಕ್ಟೀವ್ಸ್' ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಇದರಿಂದ ಸ್ಪಷ್ಟವಾಗಿ ಗುರುತಿಸಬಹುದು. ಹಾಗೆಯೇ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ವಿವರಗಳನ್ನು ಸ್ಕಿಲ್ ಕನೆಕ್ಟ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜತೆಗೆ, ಪದವೀಧರರಾಗಿ ಹೊರಹೋಗಿರುವ ವಿದ್ಯಾರ್ಥಿಗಳನ್ನೂ ಇದರಲ್ಲಿ ನೋಂದಾಯಿಸಬೇಕು. ಇದರಿಂದ ಆ ಮಕ್ಕಳಿಗೆ ಯಾವ ಕೌಶಲಗಳನ್ನು ಕಲಿಸಬಹುದು ಎನ್ನುವುದು ಉದ್ಯಮ ವಲಯದವರಿಗೂ ಗೊತ್ತಾಗುತ್ತದೆ. ಆದುದರಿಂದ ಎನ್‍ಇಪಿ ಬಗ್ಗೆ ಕಾಲೇಜು ಹಂತದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು. 

ಇಲಾಖೆಯಲ್ಲಿ ಸುಶಾಸನದ ಅತ್ಯುತ್ತಮ ಅಂಶಗಳೆಲ್ಲವೂ ಜಾರಿಗೆ ಬರಬೇಕು. ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಈಗಂತೂ ಆಯಾ ಕಾಲೇಜುಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ಕಾಲೇಜುಗಳಿಗೇ ನೀಡಲಾಗುತ್ತಿದೆ. ಈ ಮೂಲಕ ಆರ್ಥಿಕ ಸ್ವಾತಂತ್ರ, ಪಾರದರ್ಶಕತೆ ಮತ್ತು ಹೆಚ್ಚಿನ ಉತ್ತರದಾಯಿತ್ವಗಳನ್ನು ರೂಢಿಗೆ ತರಲಾಗಿದೆ ಎಂದು ಅವರು ವಿವರಿಸಿದರು.

‘ರಾಜ್ಯದಲ್ಲಿ 3 ರಾಜ್ಯಗಳಿಗೆ ಆಗುವಷ್ಟು ಉದ್ಯೋಗಾವಕಾಶಗಳಿವೆ. ಇನ್ನೊಂದೆಡೆಯಲ್ಲಿ ನಿರುದ್ಯೋಗವು ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ನಮ್ಮ ಮುಂದಿರುವ ಉಜ್ವಲ ಅವಕಾಶಗಳು ಸ್ಥಳೀಯ ಯುವಜನರಿಗೆ ಸಿಗುವುದನ್ನು ಕಲಿಕೆಯ ಹಂತದಲ್ಲೇ ಖಾತ್ರಿ ಪಡಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತ ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಮತ್ತು ಕಲಿಕೆಯಲ್ಲಿ ಜಾಗತಿಕ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯ’

-ಡಾ.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ 

Similar News