×
Ad

ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ಸೌಕರ್ಯ ಅಭಿವೃದ್ಧಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ದೇವನಹಳ್ಳಿ ಸಮೀಪ ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ

Update: 2022-12-31 18:11 IST

ಬೆಂಗಳೂರು, ಡಿ. 31: ಭಯೋತ್ಪಾದನೆ, ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು. ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಲು ಎಲ್ಲ  ಪೊಲೀಸ್ ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ, ಭದ್ರತೆ ಹೆಚ್ಚಿಸುವುದರ ಜತೆಗೆ ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರ ಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಶನಿವಾರ ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ, ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೇಟ್ ಗಡಿ ರಕ್ಷಣಾ ದಳ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅಮಿತ್ ಶಾ, ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ. ಮುಂಬರುವ ದಿನಗಳಲ್ಲಿ ದೇಶದ ಪೊಲೀಸ್ ವ್ಯವಸ್ಥೆಗೆ ಪ್ರಯೋಜನಕಾರಿಯಾಗಲಿದೆ. ವಿವಿಧ ಪೊಲೀಸ್ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜವು ಚಲನಶೀಲವಾಗಿರುತ್ತದೆ ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ಬಲಗಳೂ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ ಎಂದು ನುಡಿದರು.

ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರಗಳನ್ನು ರೂಪಿಸಿಕೊಳ್ಳುವುದು ಮಹತ್ವವಾಗಿರುತ್ತದೆ. ಪೊಲೀಸ್ ಸಂಸ್ಥೆಗಳ ನಡುವೆ ಸಹಯೋಗ ತರುವುದು ಅಗತ್ಯ. ಹೊಸ ಕಲಿಕೆ, ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್ ದಳಗಳು ಪರಿಪೂರ್ಣವಾಗಲು ಸಾಧ್ಯ ಎಂದ ಅವರು, ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ, ಆಚರಣೆಗಳಿವೆ. ಅದಕ್ಕೆ ಅನುಗುಣವಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ. ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಅನ್ವೇಷಿಸುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂದು ಹೇಳಿದರು.

‘ದೇಶದ ಮಹಾನಗರಗಳಲ್ಲಿ ಬಹುಭಾಷಿಕರು ನೆಲೆಸುತ್ತಿದ್ದಾರೆ. ಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ. ಮಹಾನಗರಗಳ ಸುರಕ್ಷತೆಗೂ ಸಂಶೋಧನೆ, ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದ ಅವರು, ಹೈದರಾಬಾದ್, ಗಾಜಿಯಾಬಾದ್, ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಐಟಿ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ನೀಡುತ್ತಿವೆ. ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸಹಯೋಗದಲ್ಲಿ ನಡೆಯುವ ಅಧ್ಯಯನಗಳು ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪೊಲೀಸ್ ತನಿಖೆಗಳಿಗೆ ನೆರವಾಗಲಿವೆ. ಬಿಪಿಆರ್ ಆ್ಯಂಡ್ ಡಿ ಸಂಸ್ಥೆಗೆ ಕೇಂದ್ರ ಸಂಪೂರ್ಣ ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.

ದೇಶದ ಗಡಿರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸುವಂತಾಗಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ  ವಸತಿ ನಿರ್ಮಾಣ ಮಾಡಲು ಪ್ರಧಾನಿ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್  ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ. ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿಯು ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಉತ್ಕೃಷ್ಟ ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಎಚ್ಚರಿಕೆಯ ದೇಶಸೇವೆ ಮಾಡುತ್ತಿದ್ದಾರೆ. ಐಟಿಬಿಪಿ ಯೋಧರು ಭೀಮವೀರರಾಗಿದ್ದಾರೆ. ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಭಾರತ ಟಿಬೆಟ್ ಗಡಿ ಪೊಲೀಸ್ ದಳದ ಮಹಾನಿರ್ದೇಶಕ ಅನೀಶ್ ದಯಾಳ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ ಭಾಗವಹಿಸಿದ್ದರು.

ಪತ್ತೇದಾರಿ ತರಬೇತಿ ಸಂಸ್ಥೆ ಶಿಲಾನ್ಯಾಸ:

'ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‍ಮೆಂಟ್(ಬಿಪಿಆರ್‍ಡಿ)ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರಿಯ ಪತ್ತೇದಾರಿ ತರಬೇತಿ   ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ (ಸ್ಮಾರ್ಟ್‍ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್‍ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಕೇಂದ್ರದಲ್ಲಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಓಗಳು ಹಾಗೂ ಸಿಎಪಿಎಫ್‍ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೋರ್ಸ್‍ಗಳನ್ನು ನೀಡಲಾಗುವುದು. ಪೊಲೀಸ್ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶ.. ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಈ ಕೇಂದ್ರಕ್ಕಾಗಿ ರಾಜ್ಯ ಸರಕಾರ 35 ಎಕರೆ ಭೂಮಿಯನ್ನು ಒದಗಿಸಿದೆ’

-ಅಮಿತ್ ಶಾ ಕೇಂದ್ರ ಗೃಹ ಸಚಿವ

Similar News