ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಶರ್ಟ್ ತೆಗೆಯಲು ಹೇಳಿದ್ದರು: ಮಹಿಳೆ ಆರೋಪ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ನನಗೆ ಶರ್ಟ್ ತೆಗೆಯುವಂತೆ ಹೇಳಿದ್ದರು ಎಂದು ಮಹಿಳೆಯೊಬ್ಬರು ಮಂಗಳವಾರ ಆರೋಪಿಸಿದ್ದು ಇದೊಂದು ಅವಮಾನಕರ ಅನುಭವ ವಾಗಿತ್ತು ಎಂದು ಹೇಳಿದ್ದಾರೆ.
ಟ್ವಿಟರ್ನಲ್ಲಿ ತಮ್ಮ ಸಂಕಷ್ಟವನ್ನು ವಿವರಿಸಿರುವ ವಿದ್ಯಾರ್ಥಿ ಹಾಗೂ ಸಂಗೀತಗಾರ್ತಿ ಕ್ರಿಶಾನಿ ಗಧ್ವಿ “ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ನನ್ನ ಶರ್ಟ್ ತೆಗೆಯುವಂತೆ ಕೇಳಲಾಗಿತ್ತು. ಸೆಕ್ಯುರಿಟಿ ಚೆಕ್ಪಾಯಿಂಟ್ನಲ್ಲಿ ನಿಂತಿರುವುದು ಮಹಿಳೆಯಾಗಿ ನೀವು ಎಂದಿಗೂ ಬಯಸುವುದಿಲ್ಲ. ಇದು ನಿಜವಾಗಿಯೂ ಅವಮಾನಕರವಾಗಿತ್ತು. ಬೆಂಗಳೂರು ಏರ್ ಪೋರ್ಟ್ ಗೆ ಬಟ್ಟೆ ತೆಗೆಯಲು ಮಹಿಳೆಯರೇ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.
ಈ ಟ್ವೀಟ್ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಇಂಟರ್ನೆಟ್ ಬಳಕೆದಾರರ ಗಮನ ಸೆಳೆಯಿತು. ಈ ವಿಚಾರವನ್ನು ಭದ್ರತಾ ತಂಡದ ಗಮನಕ್ಕೆ ತರಲಾಗಿದೆ ಎಂದು ಭರವಸೆ ನೀಡಿದ ವಿಮಾನ ನಿಲ್ದಾಣವು ಘಟನೆಗೆ ವಿಷಾದ ವ್ಯಕ್ತಪಡಿಸಿತು,
“ಹಲೋ ಕ್ರಿಶಾನಿ ಗಧ್ವಿ, ನಿಮಗೆ ಆಗಿರುವ ಕಹಿ ಅನುಭವಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಹಾಗೂ ಇದು ಸಂಭವಿಸಬಾರದಿತ್ತು. ನಾವು ಇದನ್ನು ನಮ್ಮ ಕಾರ್ಯಾಚರಣೆ ತಂಡದ ಗಮನಕ್ಕೆ ತಂದಿದ್ದೇವೆ. ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ನಿರ್ವಹಿಸಲ್ಪಡುವ ಭದ್ರತಾ ತಂಡದ ಗಮನಕ್ಕೂ ತಂದಿದ್ದೇವೆ'' ಎಂದು ಬೆಂಗಳೂರು ಏರ್ ಪೋರ್ಟ್ ಟ್ವೀಟಿಸಿದೆ.