ಶರಣ್ ಪಂಪ್‌ವೆಲ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಗ್ರಹ

Update: 2023-01-29 17:00 GMT

ಮಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತಿಯಾಗಿ ಸುರತ್ಕಲ್‌ನಲ್ಲಿ ಮುಹಮ್ಮದ್ ಫಾಝಿಲ್‌ನನ್ನು ನಾವೇ ಹತ್ಯೆ ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವ ವಿಹಿಂಪ ಮುಖಂಡ ಶರಣ್ ಪಂಪ್‌‌ವೆಲ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ.

ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ಆದಾಗ ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಪಕ್ಷವು ನಿರಂತರವಾಗಿ ಹೋರಾಟ ನಡೆಸಿತ್ತು. ಆದರೆ ಪೊಲೀಸರು ಕಾಟಾಚಾರಕ್ಕೆ ತನಿಖೆ ನಡೆದಿ ಕೆಲವು ಆರೋಪಿಗಳನ್ನು ಬಂಧಿಸಿತ್ತು. ಪೊಲೀಸರ ನಿರ್ಲಕ್ಷ್ಯದಿಂದ ನೈಜ ಆರೋಪಿಗಳ ಮುಖ ಅನಾವರಣ ಆಗಲೇ ಇಲ್ಲ.ಇದೀಗ ಶರಣ್ ಪಂಪ್ ವೆಲ್ ಬಹಿರಂಗವಾಗಿ ಫಾಝಿಲ್‌ನನ್ನು ನಾವೇ ಹತ್ಯೆ ಮಾಡಿಸಿದ್ದು ಎಂದ ಕಾರಣ ಪೊಲೀಸರು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೆ.ಕೆ.ಶಾಹುಲ್ ಹಮೀದ್ ಆಗ್ರಹಿಸಿದ್ದಾರೆ.

Similar News