ಫಾಝಿಲ್ ಕುಟುಂಬಕ್ಕೆ ದೊರೆಯದ ಪರಿಹಾರ: ಶಾಸಕ ಭರತ್ ಶೆಟ್ಟಿ ಸ್ಪಷ್ಟನೆ ನೀಡುವಂತೆ ಮುನೀರ್ ಕಾಟಿಪಳ್ಳ ಆಗ್ರಹ

Update: 2023-01-31 15:35 GMT

ಮಂಗಳೂರು: ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಝಿಲ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಸಿಗಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ತಿಳಿಸಿದ್ದು, ಈ ಬಗ್ಗೆ ಪ್ರಶ್ನೆಗಳೆನ್ನೆತ್ತಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಶಾಸಕರಿಂದ ಸ್ಪಷ್ಟೀಕರಣ ಕೇಳಿದ್ದಾರೆ.

ಫಾಝಿಲ್ ಕುಟುಂಬಕ್ಕೆ ಪರಿಹಾರ ದೊರಕಲಿದೆ, ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಹೇಳಿದ್ದೀರಿ. ಪ್ರವೀಣ್ ನೆಟ್ಟಾರು ಮನೆಗೆ ಖುದ್ದು ಮುಖ್ಯಮಂತ್ರಿ ಭೇಟಿ ನೀಡಿ, ಸರಕಾರ  25 ಲಕ್ಷ ರೂ. ನೀಡಿದೆ. ಅದೇ ಸಂದರ್ಭದಲ್ಲಿ ಕೊಲೆಯಾಗಿರುವ ಫಾಝಿಲ್ ಕುಟುಂಬಕ್ಕೆ ಪರಿಹಾರ ನೀಡುವುದು ಇನ್ನೂ ಪ್ರಸ್ತಾವನೆಯ ಹಂತದಲ್ಲೇ ಉಳಿಯಲು ಕಾರಣವೇನು ? ಇದು ತಾರತಮ್ಯ ನೀತಿಗೆ ಸಾಕ್ಷಿಯಲ್ಲವೆ ? ಪ್ರಸ್ತಾವನೆ ಯಾವ ಹಂತದಲ್ಲಿ ಇದೆ ಎಂಬುದರ ದಾಖಲೆ ಒದಗಿಸಬಹುದೆ ? ಪರಿಹಾರ ಯಾವಾಗ ದೊರಕಿಸುತ್ತೀರಿ ಎಂದು ಹೇಳಬಹುದೆ ಎಂದು ಎಂದು ಶಾಸಕರನ್ನು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಫಾಝಿಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಮನಸ್ಸಿತ್ತು, ಅಲ್ಲಿ ಗಲಾಟೆ ನಡೆಸುವ ಸಂಚು ರೂಪಿಸಿರುವ ಮಾಹಿತಿಯಿಂದ ತೆರಳಲಿಲ್ಲ ಎಂಬ ಶಾಸಕರ ಹೇಳಿಕೆ ಅಪ್ಪಟ ಸುಳ್ಳು. ಫಾಝಿಲ್ ಕುಟುಂಬ ಜನ ಪ್ರತಿನಿಧಿಗಳ ಭೇಟಿಗೆ ಖಾತರಿಸುತ್ತಿತ್ತು. ನೀವು, ನಿಮ್ಮ ಮುಖ್ಯಮಂತ್ರಿಗಳ ಸಹಿತ ಇಡೀ ಬಿಜೆಪಿ ಪಕ್ಷ "ಹಿಂದುಗಳ ಪರ" ಎಂದು ತೋರಿಸಿಕೊಳ್ಳಲು ಮುಸ್ಲಿಂ ಸಂತ್ರಸ್ತ ಕುಟುಂಬಗಳ‌ನ್ನು ಭೇಟಿಯಾಗಬಾರದು, ಪರಿಹಾರ ನೀಡಬಾರದು ಎಂಬ ತಾರತಮ್ಯದ, ಜನಾಂಗ ದ್ವೇಷದ ಅತ್ಯಂತ ಕೆಟ್ಟ ನಿಲುವು ತೆಗೆದು ಕೊಂಡಿದ್ದಿರಿ. ಅದರ ಭಾಗವಾಗಿ ಫಾಝಿಲ್ ಕುಟುಂಬದಿಂದ ಅಂತರ ಕಾಯ್ದು ಕೊಂಡಿರಿ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಲಾಟೆ ನಡೆಸುವ ಸಂಚು ರೂಪಿಸಿದ್ದು ನಿಜವೇ ಆಗಿದ್ದರೆ, ಆ ಕುರಿತು ಮಾಹಿತಿ ದೊರಕಿದ ಮೇಲೂ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಇನ್ನಾದರೂ ಫಾಝಿಲ್ ಮನೆಗೆ ಭೇಟಿ ನೀಡಲು ನೀವು ಸಿದ್ದರಿದ್ದೀರಾ ?, ನಿಮ್ಮ ಕ್ಷೇತ್ರದಲ್ಲಿ ಮತೀಯ ದ್ವೇಷದಿಂದ ಕೊಲೆಯಾದ ಅಂಗಡಿ ವ್ಯಾಪಾರಿ ಕಾಟಿಪಳ್ಳದ ಜಲೀಲ್ ಮನೆಗೇಕೆ ಭೇಟಿ ನೀಡಲಿಲ್ಲ? ಆ ಕುಟುಂಬಕ್ಕೆ ಯಾಕೆ ಪರಿಹಾರ ಒದಗಿಸಲಿಲ್ಲ ಎಂದು ಶಾಸಕ ಭರತ್ ಶೆಟ್ಟಿಯನ್ನು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

"ಫಾಝಿಲ್ ಕೊಲೆ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಮ್ಮ  ಹುಡುಗರೇ  ಮಾಡಿದ್ದು" ಎಂಬ ಶರಣ್ ಪಂಪ್ ವೆಲ್ ಹೇಳಿಕೆ ನಿಮ್ಮ ಗಮನಕ್ಕೇ ಬಂದಿಲ್ಲ ಎಂಬ ನಿಮ್ಮ ಮಾತು ಕೇಳಿ ಅಚ್ಚರಿಯೇನೂ ಆಗಲಿಲ್ಲ. ನೀವು ನಿಮಗೆ ಬೇಕಾದದ್ದನ್ನಷ್ಟೇ ಕಾಣ ಬಲ್ಲಿರಿ, ಕೇಳ ಬಲ್ಲಿರಿ ಎಂಬುದು ಎಲ್ಲರಿಗೂ ತಿಳಿದಿದೆ. ಇದೆಲ್ಲಾ ಹೋಗಲಿ, ಕುಸಿಯುವ ಭೀತಿಯಲ್ಲಿರುವ ಕೂಳೂರು ಸೇತುವೆಗೆ ಬದಲಿಯಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮೂರು ವರ್ಷದಿಂದ ಕುಂಟುತ್ತಾ ಈಗ ಪೂರ್ತಿ ನಿಂತಿದೆ, ಸುರತ್ಕಲ್, ಕೃಷ್ಣಾಪುರದ ಮಾರುಕಟ್ಟೆ ಕಟ್ಟಡಗಳ ನಿರ್ಮಾಣ, ಇಡ್ಯಾ ಗ್ರಾಮದ ವಸತಿ ರಹಿತರಿಗೆ ಮಂಜೂರಾದ ವಸತಿ ಸಮುಚ್ಚಯ ನಿರ್ಮಾಣ  ಹಂತದಲ್ಲಿ ಅರ್ಧದಲ್ಲೇ ನಿಂತಿದೆ. ಇವುಗಳಾದರು ನಿಮ್ಮ ಗಮನಕ್ಕೆ ಬಂದಿದೆಯೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News