​ಬೆಂಗಳೂರು: ವಿಡಿಯೊ ಕರೆಯಲ್ಲಿ ಪತ್ನಿಯನ್ನು ತೋರಿಸಿಲ್ಲ ಎಂದು ಸ್ನೇಹಿತನ ಕೊಲೆ

Update: 2023-02-02 14:58 GMT

ಬೆಂಗಳೂರು, ಫೆ. 2: ವಿಡಿಯೊ ಕರೆಯಲ್ಲಿ ಪತ್ನಿಯನ್ನು ತೋರಿಸಿಲ್ಲ ಎನ್ನುವ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

ರಾಜೇಶ್ ಮಿಶ್ರಾ ಎಂಬಾತ ಕೊಲೆಯಾಗಿರುವ ಸ್ನೇಹಿತ ಎಂದು ಪೊಲೀಸರು ಗುರುತಿಸಿದ್ದು, ಕೃತ್ಯವೆಸಗಿದ ಆರೋಪದಡಿ ಸುರೇಶ್‍ನನ್ನು ಬಂಧಿಸಲಾಗಿದೆ.

ಸುರೇಶ್ ಹಾಗೂ ರಾಜೇಶ್ ಇಬ್ಬರೂ ಎಚ್‍ಎಸ್‍ಆರ್ ಲೇಔಟ್‍ನ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾಜೇಶ್ ಮಿಶ್ರಾತನ್ನ ಪತ್ನಿಯ ಜೊತೆಗೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ನಿನ್ನ ಪತ್ನಿ ನೋಡುವೆ ವಿಡಿಯೊ ಕರೆ ಮಾಡುಎಂದು ಸುರೇಶ್ ಪಟ್ಟು ಹಿಡಿದಿದ್ದಾನೆ. ಆಗ ತನ್ನ ಪತ್ನಿಯನ್ನು ಏಕೆ ತೋರಿಸಬೇಕೆಂದು ರಾಜೇಶ್ ಗಲಾಟೆ ಶುರು ಮಾಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ರಾಜೇಶ್ ಹೊಟ್ಟೆಗೆ ಕತ್ತರಿಯಿಂದಸುರೇಶ್ ಬಲವಾಗಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್‍ ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಕೃತ್ಯ ನಡೆಸಿದ ಸುರೇಶ್‍ ನನ್ನು ಬಂಧಿಸಿದ್ದಾರೆ.

Similar News