ಬಿಜೆಪಿಯದ್ದು ಅಗ್ಗದ ಯೋಜನೆಯಲ್ಲ, ಭವಿಷ್ಯದ ಯೋಜನೆ: ಸಂಸದ ತೇಜಸ್ವಿ ಸೂರ್ಯ

Update: 2023-02-05 15:48 GMT

ಮಂಗಳೂರು, ಫೆ.5: ಕಾಂಗ್ರೆಸ್‌ನಂತೆ ಬಿಜೆಪಿಯು ಯಾವತ್ತೂ ಅಗ್ಗದ ಯೋಜನೆ ಪ್ರಕಟಿಸುತ್ತಿಲ್ಲ. ಭವಿಷ್ಯದ ಹಿತ ದೃಷ್ಟಿಯಿಂದ ಅತ್ಯುತ್ತಮ ಯೋಜನೆಯನ್ನು ರೂಪಿಸುತ್ತಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ದ.ಕ. ಬಿಜೆಪಿಯ ಆರ್ಥಿಕ ಪ್ರಕೋಷ್ಠದಿಂದ ರವಿವಾರ ಇಲ್ಲಿನ ಕೆನರಾ ಶಿಕ್ಷಣಸಂಸ್ಥೆಗಳ ಸುಧೀಂದ್ರ ಸಭಾಂಗಣದಲ್ಲಿ ‘ಕೇಂದ್ರ ಬಜೆಟ್ ಕುರಿತ ವಿಶ್ಲೇಷಣೆಹಾಗೂ ಸಂವಾದ’ದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ಸರಕಾರದಂತೆ ಯಾವತ್ತೂ ದೇಶಕ್ಕೆ ನಷ್ಟವಾಗುವ ಅಗ್ಗದ ಕೊಡುಗೆಗಳ ಪ್ರಚಾರ ಯೋಜನೆಯನ್ನು ಮೋದಿ ಸರಕಾರ ಮಾಡಿಲ್ಲ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋ.ರೂ. ಕಾದಿರಿಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಬಹಳ ವರ್ಷಗಳ ನೀರಿನ ಬವಣೆಯನ್ನು ಹೋಗಲಾಡಿಸಲು ಕ್ರಮಕೈಗೊಂಡಿದೆ. ಬೆಂಗಳೂರಿನ ಸಬರ್ಬನ್ ರೈಲು ಯೋಜನೆಗೆ 1,500 ಕೋ.ರೂ.,ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಗರಿಷ್ಠ 7,500 ಕೋ.ರೂ. ಮೀಸಲಿಟ್ಟಿದೆ. ಕೃತಕ ಬುದ್ಧಿಮತ್ತೆ, ಸ್ಟಾರ್ಟಪ್, 5 ಜಿ ಲ್ಯಾಬ್ ನಿರ್ಮಾಣ ಸಹಿತ ವಿವಿಧ ರೀತಿಯ ಸಂಶೋಧನೆಗಳಿಗೆ ಪ್ರತ್ಯೇಕ ಮೂಲಸೌಕರ್ಯ ನಿಧಿಬಳಕೆಯಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಈ ಬಜೆಟ್ ಕೇವಲ ಆದಾಯ ತೆರಿಗೆಯ ತುಲನೆ ಮಾತ್ರವಲ್ಲ, ಭಾರತದ ವರ್ತಮಾನ ಮತ್ತು ಭವಿಷ್ಯವನ್ನು ಹೇಳಬಲ್ಲ ವಾರ್ಷಿಕ ಪ್ರಕ್ರಿಯೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಒಂಬತ್ತನೇ ಬಜೆಟ್ ಇದಾಗಿದ್ದು, ವಿಶ್ವದಲ್ಲಿ ಭಾರತ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆ ಬ್ರಿಟನ್‌ನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ದೇಶದಲ್ಲಿ ಯುಪಿಐ ಮೂಲಕ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ಅಭಿವೃದ್ಧಿ ಹೊಂದಿದರಾಷ್ಟ್ರಕ್ಕಿಂತ ಭಾರತದಲ್ಲೇ ಹೆಚ್ಚಾಗುತ್ತಿದೆ. ಎಂಟು ವರ್ಷಗಳಲ್ಲಿ 49.5 ಕೋಟಿಮಂದಿಗೆ ಬ್ಯಾಂಕ್ ಖಾತೆ, 22 ಕೋಟಿಗೂ ಅಧಿಕ ಶೌಚಾಲಯ, 9.5 ಕೋಟಿ ಎಲ್‌ಪಿಜಿ ಸಂಪರ್ಕ, 26 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ, ಕಿಸಾನ್ ಸನ್ಮಾನ್ ಸಹಿತ ಅನೇಕ ಜನೋಪಯೋಗಿ ಯೋಜನೆ ಕಾರ್ಯಗತಗೊಳಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮೇಯರ್ ಜಯಾನಂದ ಅಂಚನ್, ಸಿಎ ಅನಂತೇಶ್ ಪ್ರಭು, ಅಭಿವ್ಯಕ್ತಪರಿಷತ್ ಅಧ್ಯಕ್ಷ ರವೀಂದ್ರನಾಥ್, ಆರ್ಥಿಕ ಪ್ರಕೋಷ್ಠ ರಾಜ್ಯಸದಸ್ಯ ಚಿದಾನಂದ್,ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಬಿಜೆಪಿ ಆರ್ಥಿಕ ಪ್ರಕೋಷ್ಠಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.

Similar News