ವಿಚ್ಛೇದಿತ ಪತ್ನಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶಕ್ಕೆ ಅರ್ಹಳು:ಬಾಂಬೆ ಹೈಕೋರ್ಟ್

Update: 2023-02-06 17:47 GMT

ಮುಂಬೈ,ಫೆ.6: ವಿಚ್ಛೇದಿತ ಪತ್ನಿಯು ಕೌಟುಂಬಿಕ ದೌಜರ್ನ್ಯ ಕಾಯ್ದೆಯಡಿ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಬಾಂಬೆ ಹೈಕೋರ್ಟ್(Bombay High Court) ಎತ್ತಿ ಹಿಡಿದಿದೆ.

ವಿಚ್ಛೇದಿತ ಪತ್ನಿಯು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ (PWDVA)ಯಡಿ ಜೀವನಾಂಶ ಪಡೆಯಲು ಅರ್ಹಳೇ ಎಂಬ ಪ್ರಶ್ನೆಗೆ ಉತ್ತರಿಸುವಾಗ ಬಾಂಬೆ ಉಚ್ಚ ನ್ಯಾಯಾಲಯವು,ಒಮ್ಮೆ ಅಂತಹ ಹಿಂಸಾಚಾರವನ್ನು ಎಸಗಿದರೆ ನಂತರದ ವಿಚ್ಛೇದನವು ಪತಿಯನ್ನು ಆತನ ವಿತ್ತೀಯ ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ ಎಂದು ಹೇಳಿದೆ.

2013,ಮೇ 6ರಂದು ವಿವಾಹವಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್‌ವೋರ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ.ಆರ್.ಜಿ.ಅವಚಾತ್(R.G Avachat) ಅವರ ಪೀಠವು ಕೈಗೆತ್ತಿಕೊಂಡಿತ್ತು. ಎರಡು ತಿಂಗಳಿಗೂ ಕೊಂಚ ಹೆಚ್ಚು ಸಮಯ ದಂಪತಿ ಒಟ್ಟಿಗೆ ವಾಸವಾಗಿದ್ದರು.

ಪತಿ ತನ್ನನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಮತ್ತು ತನ್ನನ್ನು ಮನೆಯಿಂದ ಹೊರಕ್ಕೆ ದಬ್ಬಿದ್ದ ಎಂದು ಪತ್ನಿ ಹೇಳಿಕೊಂಡಿದ್ದಳು. ಆದರೆ ಕಾನ್‌ಸ್ಟೇಬಲ್ ತನ್ನದೇ ಆದ ನಿರೂಪಣೆಯನ್ನು ಹೊಂದಿದ್ದ. ತನ್ನ ಪತ್ನಿ ತನ್ನನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಮತ್ತು ಮನೆಯನ್ನು ಅವಳಾಗಿಯೇ ಬಿಟ್ಟು ಹೋಗಿದ್ದಳು ಎನ್ನುವುದು ಆತನ ವಿವರಣೆಯಾಗಿತ್ತು. ಹೀಗಾಗಿ ಆತ ವಿವಾಹ ವಿಚ್ಛೇದನ ಅರ್ಜಿಗೆ ಆದ್ಯತೆಯನ್ನು ನೀಡಿದ್ದ ಮತ್ತು ನ್ಯಾಯಾಲಯವು ಅದನ್ನು ಅನುಮತಿಸಿತ್ತು. ಪತ್ನಿಯೂ ವಿಚ್ಛೇದನ ಆದೇಶಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ.

ಕಾನ್‌ಸ್ಟೇಬಲ್ ಪರ ವಕೀಲ ಮಚ್ಛೀಂದ್ರ ಪಾಟೀಲ್ ಅವರು,ವೈವಾಹಿಕ ಸಂಬಂಧ ಊರ್ಜಿತದಲ್ಲಿರಲಿಲ್ಲ,ಹೀಗಾಗಿ ವಿಚ್ಛೇದನದ ಆದೇಶದ ದಿನಾಂಕದಿಂದ ಪತ್ನಿಯು ಪಿಡಬ್ಲ್ಯುಡಿವಿಎ ಅಡಿ ಯಾವುದೇ ಪರಿಹಾರಕ್ಕೆ ಅರ್ಹಳಲ್ಲ ಎಂದು ವಾದಿಸಿದ್ದರು.

ಸ್ಪಷ್ಟನೆಗಾಗಿ,ಈ ಪ್ರಕರಣದಲ್ಲಿ ಪತಿ ಮೊದಲು ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯು ವಿಚಾರಣೆಗೆ ಬಾಕಿಯಿದ್ದಾಗ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶವನ್ನು ಕೋರಿ ಪತ್ನಿಯು ಅರ್ಜಿ ಸಲ್ಲಿಸಿದ್ದಳು. ಅದನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಮಹಿಳೆ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಳು ಮತ್ತು ಅದು ಜೀವನಾಂಶವನ್ನು ಮಂಜೂರು ಮಾಡಿತ್ತು. ಇದನ್ನು ಪತಿಯು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಈ ನಡುವೆ ಆದೇಶ ಹೊರಬೀಳುವುದರೊಂದಿಗೆ ವಿಚ್ಛೇದನ ಪ್ರಕ್ರಿಯೆ ಅಂತ್ಯಗೊಂಡಿತ್ತು.

ವಿಚ್ಛೇದನ ಪ್ರಕ್ರಿಯೆಯಲ್ಲಿ ಕಾನ್‌ಸ್ಟೇಬಲ್ 2.5 ಲ.ರೂ.ಗಳ ಇಡಿಗಂಟನ್ನು ಪತ್ನಿಗೆ ಪಾವತಿಸಿದ್ದ. ಮಾಸಿಕ 6,000 ರೂ.ಗಳ ಜೀವನಾಂಶ ನೀಡುವಂತೆ ಸೆಷನ್ಸ್ ನ್ಯಾಯಾಲಯದ ಆದೇಶವು ಈ 2.5 ಲ.ರೂ.ಗಳನ್ನು ಪ್ರತ್ಯೇಕವಾಗಿ ಪರಿಗಣಿಸಿತ್ತು.

ಪತಿಯು ತನ್ನ ಪತ್ನಿಗೆ ಜೀವನಾಂಶವನ್ನು ನೀಡುವ ಶಾಸನಬದ್ಧ ಬಾಧ್ಯತೆಯನ್ನು ಹೊಂದಿದ್ದ. ಆದರೆ ಆತ ತನ್ನ ಬಾಧ್ಯತೆಯನ್ನು ಪೂರೈಸಲು ವಿಫಲನಾಗಿದ್ದರಿಂದ ಪತ್ನಿಗೆ ಪಿಡಬ್ಲ್ಯುಡಿವಿಎ ಅಡಿ ನ್ಯಾಯಾಲಯದ ಮೊರೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಯಿರಲಿಲ್ಲ ಎಂದು ನ್ಯಾ.ಅವಚಾತ್ ತೀರ್ಪಿನಲ್ಲಿ ಹೇಳಿದ್ದಾರೆ.

ಪತ್ನಿಗೆ ಸಣ್ಣ ಮೊತ್ತದ ಜೀವನಾಂಶವನ್ನು ನೀಡುವಂತೆ ಕಾನ್‌ಸ್ಟೇಬಲ್‌ಗೆ ಆದೇಶಿಸಿದ ಉಚ್ಚ ನ್ಯಾಯಾಲಯವು,ಆತ ತನ್ನ ಪತ್ನಿಗೆ ಮಾಸಿಕ ಕೇವಲ 6,000 ರೂ.ಗಳ ಜೀವನಾಂಶವನ್ನು ನೀಡಬೇಕಾಗಿರುವುದು ಆತನ ಅದೃಷ್ಟವಾಗಿದೆ. ಆತ ಪೊಲೀಸ್ ಸೇವೆಯಲ್ಲಿರುವುದರಿಂದ ಸಂಬಂಧಿತ ಸಮಯದಲ್ಲಿ ಮಾಸಿಕ 25,000 ರೂ.ಗೂ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದ ಮತ್ತು ಈಗ ಅದಕ್ಕಿಂತ ಬಹಳಷ್ಟು ಹೆಚ್ಚು ವೇತನವನ್ನು ಪಡೆಯುತ್ತಿದ್ದಾನೆ ಎಂದು ಬೆಟ್ಟು ಮಾಡಿದೆ.

Similar News