ಬಂಟ್ವಾಳ ಜಮೀಯತುಲ್ ಫಲಾಹ್ ನಿಂದ ಎಸ್ಸೆಸ್ಸೆಲ್ಸಿ ಕಾರ್ಯಾಗಾರ

Update: 2023-02-07 17:15 GMT

ಬಂಟ್ವಾಳ, ಪೆ. 07 : ಜ್ಞಾನ ಮತ್ತು ಮನನ ಮಾಡುವ ಗ್ರಹಿಕಾ ಅನುಭವ ಜೊತೆಯಾದಾಗ ಪಠ್ಯ ಚಟುವಟಿಕೆಗಳು ಅರ್ಥವಾಗುವುದು. ಹೀಗಾದಾಗ ನಾವು ಕಷ್ಟ ಎಂದು ಭಾವಿಸಿದ ಪರೀಕ್ಷೆಯ ಸವಾಲು ಸರಳವಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಹೇಳಿದರು.

ಅವರು ಮಂಗಳವಾರ   ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ ಶಿಸ್ತು ಮತ್ತು ಸಂಯಮದಿಂದ ಉತ್ತಮ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಗುರುತಿಸುವಂತಿರಬೇಕು ಎಂದರು. 

ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಪೂರ್ವಾಧ್ಯಕ್ಷರಾದ ಪಿ. ಮಹಮ್ಮದ್, ಸುಲೈಮಾನ್ ಸೂರಿಕುಮೇರು, ಸದಸ್ಯರಾದ ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ಅರ್ಷದ್ ಸರವು, ಆಶಿಕ್ ಕುಕ್ಕಾಜೆ, ಕೆ.ಎಸ್. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ಥರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬು ನಡ, ವಿಜ್ಞಾನ ಶಿಕ್ಷಕ ರೋಶನ್ ಅಲೆಕ್ಸಾಂಡರ್ ಪಿಂಟೋ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆದಂ ಸಾಹೇಬ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕ್ರಮವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಅಧಿವೇಶನ ನಡೆಸಿಕೊಟ್ಟರು. 

ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಆಯ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಮಾರೋಪ ಮಾತುಗಳನ್ನಾಡಿದರು. ಉಪ್ಪಿನಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಅಬೂಬಕರ್ ಪುತ್ತು ಮುಖ್ಯ ಅತಿಥಿಯಾಗಿದ್ದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಬ್ದುಲ್ ಹಕೀಮ್ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.

Similar News