ಫೆ.13 ರಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ (MEIF) ಶೈಕ್ಷಣಿಕ ಸಮ್ಮೇಳನ

Update: 2023-02-09 14:18 GMT

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF)ದ ವತಿಯಿಂದ ಫೆ.13ರಂದು ನಗರದ ಪುರಭವನದಲ್ಲಿ  ಶೈಕ್ಷಣಿಕ ಸಮ್ಮೇಳನ ನಡೆಯಲಿದೆ ಎಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 9:30ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಟೀಕೇಸ್ ಗ್ರೂಪ್‌ನ ಅಧ್ಯಕ್ಷ ಉಮರ್ ಟೀಕೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಯೆನೆಪೊಯ ಡೀಮ್ಡ್ ವಿವಿ ಕುಲಪತಿ ಡಾ. ವೈ. ಅಬ್ದುಲ್ಲ ಕುಂಞಿ ಭಾಗವಹಿಸುವರು. ಒಕ್ಕೂಟದ ಗೌರವ ಸಲಹೆಗಾರ ಸೈಯದ್ ಮುಹಮ್ಮದ್ ಬ್ಯಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಶಿಕ್ಷಕರ ಸಮಾವೇಶ: ಬೆಳಗ್ಗೆ 10:30ರಿಂದ ಮಧ್ಯಾಹ್ನ 1ರ ತನಕ ನಡೆಯಲಿರುವ ಶಿಕ್ಷಕರ ಸಮಾವೇಶದಲ್ಲಿ ಬೆಂಗಳೂರಿನ ಅಕಾಡಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆಯ ಅಧ್ಯಕ್ಷ ಡಾ.ಗುರುರಾಜ ಕರಜಗಿ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ  ಮಂಡಿಸಲಿರುವರು. ‘ಶಿಕ್ಷಣದಲ್ಲಿ ತಂತ್ರಜ್ಞಾನ’ ವಿಚಾರದಲ್ಲಿ  ಸೈಯದ್ ಸುಲ್ತಾನ್ ಅಹ್ಮದ್ ಮಾತನಾಡಲಿರುವರು. ಈ ಸಂದರ್ಭ ಮೀಫ್ ಅಂತರ್ ಶಾಲಾ ರಸಪ್ರಶ್ನೆ ನಡೆಯಲಿದೆ ಎಂದರು.

‘ಶಿಕ್ಷಣ ಸಂಸ್ಥೆಗಳ ಆಡಳಿತ  ಮಂಡಳಿ’ಯ ಸಮಾವೇಶದಲ್ಲಿ ಹೈಕೋರ್ಟ್ ವಕೀಲ ಸುದರ್ಶನ ಸುರೇಶ್  ಮಾತನಾಡಲಿದ್ದಾರೆ. ‘ಶೈಕ್ಷಣಿಕ ನಾಯಕತ್ವದ ಸವಾಲುಗಳು’ ಎಂಬ ವಿಚಾರದಲ್ಲಿ ಪ್ರಭಾಕರ ಅರಸ್ ವಿಷಯ ಮಂಡಿಸುವರು. ರಾಷ್ಟ್ರೀಯ ತರಬೇತುದಾರ ರಾಮಚಂದ್ರ ಭಟ್ ಭಾಗವಹಿಸುವರು. ಸಂಜೆ 6:30ಕ್ಕೆ ನಡೆಯುವ ‘ಹಿತೈಷಿಗಳ ಸಮಾವೇಶ’ವನ್ನು ಉಮರ್ ಟೀಕೆ ಉದ್ಘಾಟಿಸಲಿದ್ದು, ಸೈಯದ್ ಮುಹಮ್ಮದ್ ಬ್ಯಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಮೂಸಬ್ಬ ಪಿ.ಬ್ಯಾರಿ ಹೇಳಿದರು.

ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ  ಒಕ್ಕೂಟ ರಚನೆಯಾದಾಗಿನಿಂದಲೂ  ಶಿಕ್ಷಣದ ಬಗ್ಗೆ ಜಾಗೃತಿ, ಶಿಕ್ಷಕರ ತರಬೇತಿ ಕಾರ್ಯಗಾರ, ವಿದ್ಯಾರ್ಥಿ ಪ್ರೇರಕ ಕೋರ್ಸುಗಳು, ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆಗಳು ಹಾಗೂ ವಿದ್ಯಾರ್ಥಿವೇತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಮೀಫ್  20 ವರ್ಷ ಪೂರೈಸಿದ್ದು, ಕೇವಲ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ. ಇತರ ಶೈಕ್ಷಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಿವೆ. ಆಧುನಿಕ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ಕೈಗೆಟಕುವ ವೆಚ್ಚದಲ್ಲಿ ಪಡೆಯಲು ಸಹಾಯ ಮಾಡಿದೆ. ಹಿಂದೆ ನಾಲ್ಕು ಗೋಡೆಯೊಳಗೆ ಬಂಧಿಯಾಗಿದ್ದ ಸಾವಿರಾರು ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಮುಖ್ಯವಾಹಿನಿಯ ವೃತ್ತಿಪರ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇನ್ನು ಹೆಚ್ಚು ಸಂತೋಷಕರ ಸಂಗತಿಯೆಂದರೆ ಪ್ರತಿಯೊಂದು ಶಾಲೆಗಳ ಫಲಿತಾಂಶವು ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆ ಶ್ರೇಣಿಯಾಗಿದೆ.  ಕಳೆದ ಬಾರಿಗಿಂತ ಈ ವರ್ಷ ಶಾಲಾ ದಾಖಲಾತಿ ಶೇ.10ರಿಂದ 15ರಷ್ಟು ಹೆಚ್ಚಾಗಿದೆ. ಮಾರ್ಗದರ್ಶಿಸಲ್ಪಟ್ಟ ಶಾಲೆಗಳ ನಿರ್ವಹಣೆಯ ಹೆಚ್ಚಿನ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಹೇಳಿದರು.

ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಮತ್ತು ಸಾಮೂಹಿಕವಾಗಿ ರಕ್ಷಿಸಲು ಒಕ್ಕೂಟವನ್ನು ರಚಿಸುವ ನಿರ್ಧಾರವು ಮಾಜಿ ಉನ್ನತ ಶಿಕ್ಷಣ ಸಚಿವ ದಿವಂಗತ ಬಿ.ಎ ಮೊಹಿದೀನ್ ಅವರ ಕನಸಾಗಿತ್ತು. ಈ ಹಿಂದಿನ ಅಧ್ಯಕ್ಷರಾದ ಪಿ.ಎ. ಖಾದರ್ ಕುಕ್ಕಾಡಿ ಮತ್ತು ಎಡಪದವು ಮುಹಮ್ಮದ್ ಬ್ಯಾರಿ ಅವರು ‘ಮೀಫ್’ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು  ಮೂಸಬ್ಬ ಪಿ. ಬ್ಯಾರಿ  ಮಾಹಿತಿ ನೀಡಿದರು.

ಮುಸ್ಲಿಮ್  ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಕರಾವಳಿಯ ಮುಸ್ಲಿಂ ಸಮುದಾಯದಿಂದ ಸಮುದಾಯದ ಉಪಕ್ರಮವಾಗಿ ಪ್ರಾರಂಭವಾದ ವಿವಿಧ ಶಾಲೆಗಳ ಒಕ್ಕೂಟವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 150 ಶಾಲೆಗಳು ಇದರ  ಸದಸ್ಯರಾಗಿದ್ದಾರೆ. ಅಲ್ಲದೆ ಈ ಶಾಲೆಗಳಲ್ಲಿ ಸುಮಾರು 50,000 ವಿದ್ಯಾರ್ಥಿಗಳು ಕಲಿಯುತ್ತಿದ್ದು, 6,000 ಸಿಬ್ಬಂದಿ ವರ್ಗದ ಸೇವೆಯಿಂದ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿವೆ ಎಂದರು.

ಶಿಕ್ಷಣ ಮಾಧ್ಯಮ ಮತ್ತು ಶಿಕ್ಷಣ ಸಂಬಂಧಿತ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಂಸ್ಥೆಗಳ ಕಾನೂನುಬದ್ಧ ಹಕ್ಕುಗಳನ್ನು ಕಾಪಾಡುವಲ್ಲಿಯೂ ‘ಮೀಫ್’  ಮುಂಚೂಣಿಯಲ್ಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ‘ಮೀಫ್’ ಕೇಂದ್ರ ವಲಯದ ಉಪಾಧ್ಯಕ್ಷ ಬಿಎಂ ಮುಮ್ತಾಜ್ ಆಲಿ, ಪ್ರಧಾನ ಕಾರ್ಯದರ್ಶಿ ಬಿ.ಎ. ನಝೀರ್, ಕಾರ್ಯಕ್ರಮದ ಜೊತೆ ಕಾರ್ಯದರ್ಶಿ  ರಿಯಾಝ್ ಅಹ್ಮದ್ ಕೆ.ಬಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಶಾರಿಕ್ ಉಪಸ್ಥಿತರಿದ್ದರು.

Similar News