ಮದ್ಯ ಪೂರೈಕೆ ವಿಳಂಬ ಮಾಡಿದ್ದಕ್ಕೆ ಸಪ್ಲೈಯರ್ ಕೊಲೆ: ಆರೋಪಿಗಳ ಬಂಧನ

Update: 2023-02-18 13:38 GMT

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಬಸವರಾಜು ಎಂಬುವವರನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸುರೇಶ್(29) ಮತ್ತು ವಿನೋದ್ ಕುಮಾರ್(28) ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರು ನೀರು ಶುದ್ಧೀಕರಣ ಹಾಗೂ ಹವಾನಿಯಂತ್ರಿತ ದುರಸ್ತಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಮೂಲದ ಬಸವರಾಜು, ಕುಮಾರಸ್ವಾಮಿ ಲೇಔಟ್‍ನ ಮದ್ಯದಂಗಡಿಯೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು. ಜ.23ರ ಸಂಜೆ ಅಂಗಡಿಯಲ್ಲಿ ಹೆಚ್ಚು ಗ್ರಾಹಕರು ಇದ್ದುದ್ದರಿಂದ ಸುರೇಶ್ ಹಾಗೂ ವಿನೋದ್ ಕುಮಾರ್ ಅವರಿಗೆ ಮದ್ಯ ಪೂರೈಕೆ ತಡವಾಗಿದೆ. ಈ ಕಾರಣದಿಂದ ಗಲಾಟೆ ಮಾಡಿದ್ದ ಆರೋಪಿಗಳು, ಬಸವರಾಜು ಅವರನ್ನು ನಿಂದಿಸಿ ತೆರಳಿದ್ದರು. ಬೇರೆಡೆ ಮದ್ಯ ಕುಡಿದಿದ್ದ ಆರೋಪಿಗಳು, ಮತ್ತೆ ಅದೇ ಮದ್ಯದಂಗಡಿಗೆ ಹೋಗಿ ಬಸವರಾಜು ಅವರ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜು ಅವರು ಫೆ.15ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Similar News