×
Ad

ಎಸ್.ಕೆ.ಭಗವಾನ್ ನಿಧನಕ್ಕೆ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸಂತಾಪ

Update: 2023-02-20 09:29 IST

ಬೆಂಗಳೂರು, ಫೆ.20: ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಶ್ರೀ ಎಸ್. ಕೆ. ಭಗವಾನ್ ರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ದೊರೈ-ಭಗವಾನ್ ಜೋಡಿಯು ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿದೆ. ಡಾ. ರಾಜ್‌ ಕುಮಾರ್ ನಟನೆಯ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್‌ ಜೊತೆ ಸೇರಿ ನಿರ್ದೇಶಿಸಿದ್ದರು ಎಂದು ಮುಖ್ಯಮಂತ್ರಿ ನೆನಪಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ

ಕನ್ನಡ ಕಲಾ ಜಗತ್ತು ಮತ್ತು ಸಿನೆಮಾ ಪ್ರಪಂಚವನ್ನು ಬೆಳಗಿ ಬೆಳ್ಳೆತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡದ ಹಿರಿಮೆಯೂ ಆಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (ಎಸ್.ಕೆ.ಭಗವಾನ್) ಅವರ ನಿಧನ ಅತ್ಯಂತ ಬೇಸರ ತರಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ದೊರೈ ಭಗವಾನ್ ಎಂದೇ ಖ್ಯಾತರಾಗಿದ್ದ ಇವರು ಕನ್ನಡ ಸಿನೆಮಾವನ್ನು ಸಾಂಪ್ರದಾಯಿಕ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದ ಶೈಲಿ ಮತ್ತು ತಂತ್ರಜ್ಞಾನಕ್ಕೆ ಅಳವಡಿಸಿದ ಮೊದಲಿಗರಲ್ಲಿ ಒಬ್ಬರು.  “ಜೇಡರ ಬಲೆ”, “ಗೋವಾದಲ್ಲಿ ಸಿಐಡಿ 999”, “ಆಪರೇಷನ್ ಜಾಕ್‌ಪಾಟ್” ರೀತಿಯ ಸಿನಿಮಾಗಳ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಕನ್ನಡ ಸಿನಿಮಾವನ್ನು ಅರ್ಧ ಶತಮಾನದ ಹಿಂದೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದವರು. ಇವರು ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು.

ನನ್ನ ಆತ್ಮೀಯರೂ ಆಗಿದ್ದ ಇವರನ್ನು ನಾನಾ ಸಂದರ್ಭಗಳಲ್ಲಿ ಭೇಟಿಯಾಗುವ ಅವಕಾಶ ಹತ್ತಾರು ಬಾರಿ ಒದಗಿ ಬಂದಿತ್ತು. 90 ವರ್ಷ ವಯಸ್ಸಿನ ಇವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಕನ್ನಡ ರಂಗಭೂಮಿ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಬೆಳ್ಳಿ ಪರದೆಯನ್ನು ಶ್ರೀಮಂತಗೊಳಿಸಿದ ಭಗವಾನ್ ಅವರು ತಮ್ಮ 65 ವರ್ಷಗಳ ಸುದೀರ್ಘ ಸಿನಿಮಾ ಸಾಹಸಗಳಲ್ಲಿ 28ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಬೆಳ್ಳಿ ಪರದೆಗೆ ತಂದ ಕೀರ್ತಿ ಹೊಂದಿದ್ದಾರೆ.

ಭಗವಾನ್ ನಿರ್ದೇಶನದಲ್ಲಿ ಅರಳಿದ “ಕಸ್ತೂರಿ ನಿವಾಸ, ಸಂಧ್ಯಾರಾಗ, ಬಯಲುದಾರಿ, ಹೊಸ ಬೆಳಕು, ಬೆಂಕಿಯ ಬಲೆ...” ಮುಂತಾದ ಹಲವು ಸಿನಿಮಾಗಳು ಈಗಲೂ ನನ್ನ ನೆನಪಿನಲ್ಲಿ ಉಳಿದಿವೆ. ಸಿನಿಮಾ ನಿರ್ದೇಶನಕ್ಕೆ ಪೂರ್ಣವಿರಾಮ ಹಾಕಿದ ಬಳಿಕ “ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್”ನ ಪ್ರಾಂಶುಪಾಲರಾಗಿ ಇವರು ತಮ್ಮ ತಿಳಿವಳಿಕೆ, ಜ್ಞಾನ ಮತ್ತು ಅನುಭವವನ್ನು ಹೊಸ ತಲೆಮಾರಿನ ಕಲಾಸಕ್ತರಿಗೂ ವರ್ಗಾಯಿಸುವ ಮೂಲಕ ಕನ್ನಡದ ಜ್ಞಾನವನ್ನು ಹೆಚ್ಚಿಸಿದ್ದಾರೆ.

ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ. ಇವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಜಗತ್ತಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ತಮ್ಮ ಕಲಾ ಶ್ರೀಮಂತಿಕೆಯ ಕಾರಣಕ್ಕೆ ಭಗವಾನ್ ಅವರು ಕನ್ನಡ ಭಾಷೆ ಇರುವವರೆಗೂ ಕನ್ನಡ ಮಣ್ಣಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎಂದು ಹೇಳುತ್ತಾ ಹಿರಿಯ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.

Similar News