×
Ad

ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಿಎಂ ಬೊಮ್ಮಾಯಿ: ಸನ್ಮಾನ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬೋರ್ಗ್‌

Update: 2023-02-22 11:42 IST

ಬೆಂಗಳೂರು: ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೂವರೆ ಗಂಟೆ ತಡವಾಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಟೆನಿಸ್ ದಿಗ್ಗಜ, ಹನ್ನೊಂದು ಗ್ರಾನ್‌ ಸ್ಲಾಮ್ ಪ್ರಶಸ್ತಿಗಳ ವಿಜೇತ ಬ್ಯೋನ್ ಬೋರ್ಗ್ (Bjorn Borg) ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. 

ಸ್ವೀಡನ್ ದೇಶದ ಬೋರ್ಗ್ ಅವರ ಪುತ್ರ ಲಿಯೊ ಬೋರ್ಗ್, ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಪುತ್ರನ ಆಟ ನೋಡಲು ಬೋರ್ಗ್ ಬೆಂಗಳೂರಿಗೆ ಬಂದಿದ್ದಾರೆ. 

ಮಂಗಳವಾರ ಬೆಂಗಳೂರಿನ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಭಾರತದ ಮಾಜಿ ಆಟಗಾರ ವಿಜಯ್ ಅಮೃತ್‌ರಾಜಿ ಮತ್ತು ಬೋರ್ಗ್ ಅವರನ್ನು ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಬರುವುದು ತಡವಾದದ್ದಕ್ಕೆ ಸಮಾರಂಭವನ್ನು 10.15ಕ್ಕೆ ಮುಂದೂಡಲಾಯಿತು. ಆದರೆ ಸಿಎಂ ಬೊಮ್ಮಾಯಿ ಅವರು 11 ಗಂಟೆಯಾದರೂ ಬರಲಿಲ್ಲ ಎನ್ನುವ ಕಾರಣಕ್ಕೆ ಕಾರ್ಯಕ್ರಮವೂ ಆರಂಭವಾಗಲಿಲ್ಲ.

ಇದನ್ನೂ ಓದಿ: ಸಿಎಂ, ಸಚಿವರ ಹೆಲಿಕಾಪ್ಟರ್ ಬಾಡಿಗೆಗೆ 30 ಕೋಟಿ ರೂ.: 11,267 ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳ ಮಂಡನೆ

ಇತ್ತ ಬೋರ್ಗ್ ಅವರ ಪುತ್ರ ಲಿಯೊ ಅವರ ಪಂದ್ಯ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಮಗನ ಆಟ ನೋಡಲು ಬೋರ್ಗ್ ಅವರು ಗ್ಯಾಲರಿಯಲ್ಲಿ ಕುಳಿತುಕೊಂಡರು. ಈ ಪಂದ್ಯ ಆರಭವಾದ ಕೆಲವೇ ಹೊತ್ತಿನಲ್ಲಿ ಬೊಮ್ಮಾಯಿ ಅವರು ಸಮಾರಂಭಕ್ಕೆ ಆಗಮಿಸಿದರು.  ಮುಖ್ಯಮಂತ್ರಿ ಬಂದಿರುವ ವಿಷಯವನ್ನು ಬೋರ್ಗ್ ಅವರ ಗಮನಕ್ಕೆ ತರಲಾಯಿತು. ಪಂದ್ಯ ಮುಗಿದ ಬಳಿಕವಷ್ಟೇ ಬರುವುದಾಗಿ ಬೋರ್ಗ್‌ ಹೇಳಿದ್ದಾರೆ. ಇದರಿಂದ ಆಯೋಜಕರು ಸಮಾರಂಭವನ್ನು ರದ್ದುಗೊಳಿಸಬೇಕಾಯಿತು.

'ನಿಗದಿತ ಕಾರ್ಯಕ್ರಮಗಳು ಇದ್ದ ಕಾರಣ ಮುಖ್ಯಮಂತ್ರಿ ತಡವಾಗಿ ಬಂದರು' ಎಂದು ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Similar News