×
Ad

3ನೇ ಗ್ಯಾರಂಟಿ | ಬಿಪಿಎಲ್ ಕಾರ್ಡ್ ದಾರರ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಉಚಿತ ಅಕ್ಕಿ ಘೋಷಿಸಿದ ಕಾಂಗ್ರೆಸ್

Update: 2023-02-24 12:14 IST

ಬೆಂಗಳೂರು, ಫೆ. 24: ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್ ಮೂರನೇ ‘ಗ್ಯಾರಂಟಿ ಯೋಜನೆ’ ಘೋಷಿಸಿದ್ದು, ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಕೊಡುವ ವಾಗ್ದಾನ ನೀಡಿದೆ.

ಶುಕ್ರವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವ ರೇವೂ ನಾಯ್ಕ್ ಬೆಳಮಗಿ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕ ಭೀಮಾ ನಾಯ್ಕ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮೂರನೇ ‘ಗ್ಯಾರಂಟಿ ಯೋಜನೆ’ ಪೋಸ್ಟರ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಬಿಜೆಪಿ ಸರಕಾರದ ಸುಳ್ಳಿನಿಂದ ಬೇಸತ್ತಿರುವ ಜನರಿಗೆ ಯಾರನ್ನು ನಂಬಬೇಕೆಂದು ತೋಚುತ್ತಿಲ್ಲ. ಹೀಗಾಗಿ ನಮ್ಮ ಯೋಜನೆಯನ್ನು ನಾವು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಲು ‘ಗ್ಯಾರಂಟಿ ಕಾರ್ಡ್’ ಅನ್ನು ಪ್ರತಿ ಮನೆಗೂ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

‘ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ನೀಡಲು 4ರಿಂದ 5 ಸಾವಿರ ಕೋಟಿ ರೂ.ಖರ್ಚಾಗುತ್ತಿದ್ದು, 10 ಕೆ.ಜಿ.ಗೆ ಹೆಚ್ಚಾಗುವುದರಿಂದ ಹೆಚ್ಚುವರಿಯಾಗಿ 3ರಿಂದ 4 ಸಾವಿರ ಕೋಟಿ ರೂ.ಹೆಚ್ಚು ವೆಚ್ಚ ತಗುಲಬಹುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು, ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ನಮ್ಮ ಉಚಿತ ಅಕ್ಕಿ ಹಾಗೂ ನರೇಗಾ ಕಾರ್ಯಕ್ರಮಗಳು ಜನರ ಬದುಕಿಗೆ ಆಸರೆಯಾಗಿತ್ತು. ಆದರೆ ಬಿಜೆಪಿ ಸರಕಾರದ ತೀರ್ಮಾನ ಜನರಿಗೆ ನೋವು ತಂದಿದೆ. ನಾವು ಪ್ರಜಾಧ್ವನಿಯಾತ್ರೆ ಸಂದರ್ಭದಲ್ಲಿ ಜನರು ನೀವು ಅಧಿಕಾರಕ್ಕೆ ಬಂದರೆ ಅಕ್ಕಿ ಪ್ರಮಾಣ ಹೆಚ್ಚಿಸಿ ಎಂದು ಕೇಳಿದರು. ನಂತರ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ತಲಾ 10 ಕೆ.ಜಿಯಂತೆ ಬಿಪಿಎಲ್ ಕಾರ್ಡುದಾರರಿಗೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ಬೊಮ್ಮಾಯಿ, ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಕಾರ್ಯಕ್ರಮ ಅಲ್ಲ, ಮೋದಿ ಕಾರ್ಯಕ್ರಮ ಎನ್ನುತ್ತಿದ್ದಾರೆ. ಇದು ಮೋದಿ ಕಾರ್ಯಕ್ರಮವಾದರೆ ಗುಜರಾತ್, ಉತ್ತರ ಪ್ರದೇಶದಲ್ಲಿ ಉಚಿತ ಅಕ್ಕಿ ನೀಡುತ್ತಿಲ್ಲ ಯಾಕೆ? ಇನ್ನು ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಮೋದಿ ಜಾರಿಗೆ ತಂದರಾ? ಇವರು ಸುಳ್ಳನ್ನು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಇದಕ್ಕಾಗಿಯೆ ಆರೆಸ್ಸೆಸ್‍ನವರು ಇವರನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿ ಕೊನೆಯ ದಿನಗಳು: ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಮಂಡಲ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದು, ಬಿಜೆಪಿಯ ಕೊನೆ ದಿನಗಳು ಸಮೀಪಿಸುತ್ತಿವೆ. ಸಿದ್ದರಾಮಯ್ಯ ನೇತೃತ್ವದ ಸರಕಾರ 2013ರಲ್ಲಿ ಬಸವ ಜಯಂತಿ ದಿನ ಅಧಿಕಾರ ಸ್ವೀಕಾರ ಮಾಡಿ ರಾಜ್ಯ ಹಾಗೂ ದೇಶಕ್ಕೆ ಸಂದೇಶ ಕೊಟ್ಟಿದ್ದರು. ಬಿಜೆಪಿ ಸರಕಾರ ಮಾಡಲು ಸಾಧ್ಯವಾಗದ ಯೋಜನೆಗಳನ್ನು ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಮಾಡುತ್ತಿದೆ ಎಂದು ನುಡಿದರು.

‘ಸಿಎಂ ನಾವು ಇಲ್ಲದ ಸಮಯದಲ್ಲಿ ನಿನ್ನೆ ಅಧಿವೇಶನದಲ್ಲಿ ಅರ್ಕಾವತಿ ‘ರಿಡೂ’ ವಿಚಾರ ಮಾತನಾಡಿ ಪತ್ರಿಕೆಗಳಲ್ಲಿ ಹೆಡ್‍ಲೈನ್ ಬರುವಂತೆ ಮಾಡಿದ್ದಾರೆ. ಅವರು ವಿಪಕ್ಷದಲ್ಲಿ ಕೂತಿದ್ದಾಗ ಕಡಲೇಪುರಿ ತಿನ್ನುತ್ತಿದ್ದರಾ? ಇನ್ನು 4 ವರ್ಷಗಳಿಂದ ಆಡಳಿತ ಮಾಡಿದರಲ್ಲಾ ಆಗ್ಯಾಕೆ ಸುಮ್ಮನಿದ್ದರು. ಅವರು ಈ ವರದಿ ಸದನದಲ್ಲಿ ಮಂಡಿಸಿ ಚರ್ಚೆ ಮಾಡಲಿಲ್ಲ ಯಾಕೆ? ಈಗಲೂ ನಾನು ಅವರಿಗೆ ಸವಾಲು ಹಾಕುತ್ತೇನೆ. ಒಂದು ದಿನ ಅದಿವೇಶನ ವಿಸ್ತರಣೆ ಮಾಡಲಿ, ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಿ. ನಾವು ಎಐಸಿಸಿ ಅಧಿವೇಶನಕ್ಕೆ ಹೋಗದಿದ್ದರೂ ಪರ್ವಾಗಿಲ್ಲ, ನಾವು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧವಿದ್ದೇವೆ ಎಂದು ಅವರು ಹೇಳಿದರು. 

‘ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸದ ಬಿಜೆಪಿ ಸರಕಾರ ದೇವಸ್ಥಾನ ಕಟ್ಟುತ್ತೇವೆ ಎಂದರೆ ಹೇಗೆ? ದೇವಸ್ಥಾನ ಕಟ್ಟಲು, ಧರ್ಮ ಉಳಿಸಲು ಸಂಘ-ಸಂಸ್ಥೆಗಳಿವೆ. ಅಯೋಧ್ಯೆಯಲ್ಲಿ ರಾಮನ ದೇವಾಲಯವನ್ನು ಸರಕಾರ ನಿರ್ಮಾಣ ಮಾಡುತ್ತಿದೆಯೇ? ಇವರು ಭಾವನೆ ಮೂಲಕ ಆಡಳಿತ ಮಾಡುತ್ತಾರ? ನಮ್ಮ ಸರಕಾರ ಬದುಕಿನ ಆಧಾರದ ಮೇಲೆ ಆಡಳಿತ ಮಾಡುತ್ತದೆ ಎಂದು ಅವರು ನುಡಿದರು.

‘ಯುದ್ಧ, ಹೇಳಿಕೆಗಳ ಸಮರ ನಡೆಯುತ್ತಿರುವುದು ಬಿಜೆಪಿಯಲ್ಲಿ. ಬಿಎಸ್‍ವೈ ಕಣ್ಣಲ್ಲಿ ನೀರು ಹಾಕಿಸಿದ್ದು ಯಾಕೆ? ನಿರಾಣಿ ವಿಚಾರವಾಗಿ ಯತ್ನಾಳ್ ಏನು ಹೇಳಿದರು? ಸರಕಾರದ ಬಗ್ಗೆ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಏನು ಹೇಳಿದ್ದಾರೆ? ವಿಧಾನಸೌಧ ಕಾರಿಡಾರ್‍ನಲ್ಲಿ ಶಾಸಕರು ಏನು ಮಾತನಾಡುತ್ತಿದ್ದಾರೆ? ಯೋಗೇಶ್ವರ್ ಏನು ಹೇಳಿದ್ದಾರೆ? ಮಂಚದ ಮೇಲಿದ್ದ ಮಂತ್ರಿ ಯಾರು ಭ್ರಷ್ಟ ಎಂದು ಹೇಳಿದ? ಎಂಟಿಬಿ ನಾಗರಾಜ್ ಏನು ಹೇಳಿದರು? ಮಾಧ್ಯಮಗಳಲ್ಲಿ ಯಾರ ಸರಕಾರದ ರೇಟ್ ಕಾರ್ಡ್ ಪ್ರಕಟವಾಯಿತು? ಇದು ಸುಳ್ಳಾಗಿದ್ದರೆ ಅದನ್ನು ಸಾಬೀತು ಮಾಡಿ ಅವರ ವಿರುದ್ಧ ಕೇಸ್ ಯಾಕೆ ಹಾಕಿಲ್ಲ? ಇವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇದ್ದರೆ ಅಧಿವೇಶನ ವಿಸ್ತರಣೆ ಮಾಡಿ, ಚರ್ಚೆಗೆ ಅವಕಾಶ ನೀಡಲಿ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

''ಹಸಿವು ನೀಗಿಸುವಲ್ಲಿ ದೃಢ ಹೆಜ್ಜೆ ಇಡುತ್ತೇವೆ''

''ಹಸಿವು ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಈಗಾಗಲೇ ಬದ್ಧತೆಯನ್ನು ತೋರಿದೆ. ಮುಂದೆಯೂ ಆದ್ಯತೆಯ ಮೇರೆಗೆ ಹಸಿವು ನೀಗಿಸುವಲ್ಲಿ ದೃಢ ಹೆಜ್ಜೆ ಇಡುತ್ತೇವೆ. ಕಾಂಗ್ರೆಸ್ ಗ್ಯಾರಂಟಿ - 3 #AnnaBhagya ಯೋಜನೆಯಡಿಯಲ್ಲಿ ಪ್ರತಿ ತಿಂಗಳು, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ'' ಎಂದು ಕಾಂಗ್ರೆಸ್ @INCKarnataka ಟ್ವೀಟ್ ಮಾಡಿದೆ. 

Similar News