ಕಲುಷಿತ ನೀರು ಕುಡಿದು ಸಾವು ಪ್ರಕರಣ: ‘ವಾರ್ತಾಭಾರತಿ’ ವರದಿ ಆಧರಿಸಿ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲು

Update: 2023-02-26 03:59 GMT

ಬೆಂಗಳೂರು, ಫೆ.25: ರಾಜ್ಯದಲ್ಲಿ 2022ರ ಮೇ ನಿಂದ 2023ರ ಫೆ.25ರ ವರೆಗೆ ಕಲುಷಿತ ನೀರನ್ನು ಕುಡಿದು ಸುಮಾರು 15ಕ್ಕೂ ಹೆಚ್ಚು ಮಂದಿ ಮೃತಪಟ್ಟ ಪ್ರಕರಣಗಳು ದಾಖಲಾದರೆ, 450ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ವರದಿಯಾಗಿವೆ. ಈ ಕುರಿತು ‘ವಾರ್ತಾಭಾರತಿ’ ವರದಿ ಆಧರಿಸಿ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ರಾಯಚೂರು, ಯಾದಗಿರಿ, ಕಲಬುರಗಿ, ವಿಜಯನಗರ ಜಿಲ್ಲೆಗಳಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಇದಕ್ಕೆ ಒಂದು ಉದಾಹರಣೆಯಾಗಿ ಬೆಳಗಾವಿಯ ರಾಮದುರ್ಗಾ ತಾಲೂಕಿನ ಮದೇನೂರು ಗ್ರಾಮದಲ್ಲಿ 2022ರ ಅಕ್ಟೋಬರ್ 27ರಂದು ‘ಕಲುಷಿತ ನೀರನ್ನು ಸೇವನೆ: ಓರ್ವ ಮೃತ್ಯು ನಾಲ್ವರ ಗಂಭೀರ’ ತಲೆಬರಹದೊಂದಿಗೆ ‘ವಾರ್ತಾಭಾರತಿ’ ಪತ್ರಿಕೆಯು ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಆಧರಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಘಟನೆ ಸಂಬಂಧ ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಹಾಗೂ ಕುಡಿಯುವ ನೀರು ಸರಬರಾಜು ಹಾಗೂ ಗ್ರಾಮ ನೈರ್ಮಲ್ಯ ಉಪವಿಭಾಗದ ರಾಮದುರ್ಗ ಇಂಜಿನಿಯರ್‌ಅನ್ನು ಅಮಾನತುಗೊಳಿಸಿ ವಿಚಾರಣೆ ಆರಂಭಿಸಿತ್ತು.

ಸರಕಾರ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆ, ಜಲಜೀವನ್ ಮಿಷನ್, ಅಟಲ್ ಮಿಶನ್ ನಗರ ಸುಧಾರಣೆ ಮತ್ತು ಪುನಃಶ್ಚೇತನ ಯೋಜನೆ ಸೇರಿದಂತೆ ಹತ್ತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅನುದಾನ ರೂಪದಲ್ಲಿ ಕೋಟಿ ಕೋಟಿ ರೂಪಾಯಿ ಸುರಿದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಪಾಲಾಗುತ್ತಿದೆಯೇ ಹೊರತು, ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಇನ್ನು ಇದರಿಂದ ಪ್ರಾಣ ಕಳೆದುಕೊಂಡ ಕುಟುಂಬಸ್ಥರು ತಮ್ಮ ತಮ್ಮ ಮನೆಯ ಬೆನ್ನೆಲುಬುಗಳನ್ನು ಮುರಿದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿಯನ್ನು ತಲುಪಿದ್ದು, ಇತ್ತ ಅಭಿವೃದ್ಧಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎನ್ನುವಂತಾಗಿದೆ.

ಇದನ್ನೂ ಓದಿಯಾದಗಿರಿ | ಕಲುಷಿತ ನೀರು ಸೇವಿಸಿ ಇಬ್ಬರು ಮೃತ್ಯು: 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಹೀಗೆ ಈ ರೀತಿಯ ಹತ್ತಾರು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಹಾಗೂ ಲೋಕಾಯುಕ್ತದ ಬಾಗಿಲು ತಟ್ಟಿದ್ದರೂ ಸಮಸ್ಯೆಗಳು ಮಾತ್ರ ಜ್ವಲಂತವಾಗಿಯೇ ಉಳಿದುಕೊಂಡಿವೆ. ಇನ್ನು ಸರಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಚುರುಕುಗೊಳಿಸಬೇಕೆಂಬುದು ಜನಸಾಮಾನ್ಯರ ಮಾತಾಗಿದೆ.

13 ಗ್ರಾಪಂ ವ್ಯಾಪ್ತಿಯಲ್ಲಿ ಕಲುಷಿತ ನೀರು: ನೆಲಮಂಗಲ ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕೈದು ತಿಂಗಳಿಂದ ಕೊಳವೆ ಬಾವಿಗಳ ನೀರಿನ ಮೂಲಗಳು ಕಲುಷಿತಗೊಂಡಿದು ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಹಾಗೂ ಗ್ರಾಪಂಗಳು ಸಮಸ್ಯೆ ಬಗೆಹರಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


''ಲೋಕಾಯುಕ್ತ ಸಂಸ್ಥೆ ಕೇವಲ ಕೆಲವೇ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಣ್ಣೊರೆಸುವ ತಂತ್ರ ಮಾಡದೆ ತಪ್ಪಿತಸ್ಥರ ಮೇಲೆ ತನಿಖೆ ನಡೆಸಲಿ. ಸ್ಥಳೀಯ ಗ್ರಾಪಂ ಅಧಿಕಾರಿಗಳಿಂದ ಹಿಡಿದು ತಾಪಂ ಅಧಿಕಾರಿಗಳು, ಪ್ರತಿನಿಧಿಗಳು ಜಿಪಂ ಅಧಿಕಾರಿಗಳು, ಪ್ರತಿನಿಧಿಗಳು ಹಾಗೂ ಎಂಎಲ್‌ಎ ವರೆಗೂ ಈ ಪ್ರಕರಣಗಳಲ್ಲಿ ಕಾರಣಕರ್ತರಿದ್ದಾರೆ. ಲೋಕಾಯುಕ್ತ ತನ್ನಲ್ಲಿರುವ ಧಮ್ಮು, ತಾಕತ್ತನ್ನು ಇಲ್ಲಿ ತೋರಿಸಿ ಘಟನೆಗಳು ಮರುಕಳಿಸದಂತೆ ತಡೆಯಲಿ. ಮೃತ ಕುಟುಂಬಗಳಿಗೆ ಸರಕಾರ ನ್ಯಾಯವನ್ನು ಒದಗಿಸಲಿ''

- ಎಚ್.ಎಂ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ

[ಎಚ್.ಎಂ.ವೆಂಕಟೇಶ್]

Similar News