ಯಾದಗಿರಿ | ಕಲುಷಿತ ನೀರು ಸೇವಿಸಿ ಇಬ್ಬರು ಮೃತ್ಯು: 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಯಾದಗಿರಿ: ಇಲ್ಲಿನ ಗುರು ಮಠಕಲ್ ತಾಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ 40ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿರುವುದು ವರದಿಯಾಗಿದೆ.
ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿತ್ರಮ್ಮ (35) ಮತ್ತು ಸಾಯಮ್ಮ ಭೀಮಶಪ್ಪ ಮಿನಾಸ ಪುರಂ ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಕಲುಷಿತ ನೀರು ಸೇವಿಸಿದ 40ಕ್ಕೂ ಹೆಚ್ಚಿನ ಜನರು ಅನಾರೋಗ್ಯಕ್ಕೀಡಾಗಿ ಯಾದಗಿರಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
'ಇಬ್ಬರು ಮಹಿಳೆಯರು ಮೃತಪಟ್ಟಿರುವುದು ಮತ್ತು ಜನರು ಅಸ್ವಸ್ಥಗೊಳ್ಳಲು ಕಲುಷಿತ ನೀರು ಕುಡಿದಿದ್ದೇ ಕಾರಣ ಎಂಬ ಶಂಕೆಯಿದೆ. ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು 3 ವೈದ್ಯರನ್ನು ಒಳಗೊಂಡ 15 ಸದಸ್ಯರ ವೈದ್ಯಕೀಯ ತಂಡವನ್ನು ಅನುಪುರಕ್ಕೆ ಕಳುಹಿಸಲಾಗಿದೆ' ಎಂದು ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗುರುರಾಜ ಹಿರೇಗೌಡ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಈವರೆಗರೆ ಠಾಣೆಗೆ ಯಾವುದೇ ದೂರು ಬಂದಿಲ್ಲ ಎಂದು ಗುರು ಮಠಕಲ್ ಪೊಲೀಸರು ಮಾಹಿತಿ ನೀಡಿದರು.