ಸುರತ್ಕಲ್:‌ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ

Update: 2023-02-28 17:31 GMT

ಸುರತ್ಕಲ್‌, ಫೆ.28: ಪಕ್ಷಾತೀತ ನೆಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.

ಅವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ನಗರದ ವಿವಿಧ ಭಾಗಗಲ್ಲಿ ನಡೆಸಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಬಳಿಕ ಮಾತನಾಡಿದ ಶಾಸಕರು, 6ನೇ ಬ್ಲಾಕ್‌ನ ರಸ್ತೆ ಅಭಿವೃದ್ಧಿಗೆ 30ಲಕ್ಷ ರೂ., ಕೃಷ್ಣ ಮಠ ರಸ್ತೆ ಸಮಗ್ರ ಅಭಿವೃದ್ಧಿಗೆ 19ಲಕ್ಷ ರೂ., 6ನೇ ಬ್ಲಾಕ್‌ನ ಮುಂದುವರಿದ ಕಾಮಗಾರಿಗೆ 19 ಲಕ್ಷ ರೂ., ಮತ್ತು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರಸ್ತೆ ಕಾಂಕ್ರಿಟೀಕರಣ ಮತ್ತು ಚರಂಡಿ ಕಾಮಗಾರಿಗೆ 80 ಲಕ್ಷ ರೂ. ಒಟ್ಟು 1.48 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ‌ ನೆರವೇರಿಸಲಾಗಿದೆ. ಬಾಕಿ ಉಳಿದಿರುವ ಕೃಷ್ಣಾಪುರ ಮಾರುಕಟ್ಟೆ ಯೋಜನೆಗೆ ಈಗಾಗಲೇ ಅನುದಾನ ಇರಿಸಿ ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.

ಅನುದಾನ ಒದಗಿಸಿದ ನೆಲೆಯಲ್ಲಿ ಶಾಸಕರನ್ನು‌ ಗ್ರಾಮಸ್ಥರ‌ ನೆಲೆಯಲ್ಲಿ ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ ಅಭಿನಂದಿಸಿದರು.̤

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಮುಖ್  ಹರಿಪ್ರಸಾದ್ ಸಹ ಪ್ರಮುಖ್ ರಾಕೇಶ್, ಬೂತ್ ಅಧ್ಯಕ್ಷ ರವಿ ಪೂಜಾರಿ, ಜಯಚಂದ್ರ, ಮಂಡಲ ಕೋಶಾಧಿಕಾರಿ ಪುಷ್ಪರಾಜ್, ಪ್ರಜ್ವಲ್ ಬೂತ್ ಯುವ ಮೋರ್ಚಾ ಕಾರ್ಯದರ್ಶಿ ದೀಪಕ್ ದೇವಾಡಿಗ, ಸುಕೇಶ್ ಭಟ್, ದಾವೂದ್ ಬಿಎಂಆರ್, ರಮೇಶ್ ಆಚಾರ್ಯ, ಭಾಸ್ಕರ ಸನಿಲ್, ಸುಮಿತ್ರಾ ಆನಂದ, ನಾಗೇಶ್ ಮನೋಜ್ ಮುಂತಾದವರು ಉಪಸ್ಥಿತರಿದ್ದರು.

Similar News