ಬೆಂಗಳೂರು ಆಪ್ ಮುಖಂಡನ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

Update: 2023-03-20 04:56 GMT

ಬೆಂಗಳೂರು: ಆಮ್ ಆದಿ ಪಕ್ಷದ (ಆಪ್) ರಾಜ್ಯ ಯುವಘಟಕದ ಉಪಾಧ್ಯಕ್ಷನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. 

ಸ್ನೇಹಿತರ ಜೊತೆ ಯಲಹಂಕದಿಂದ ಕೆ.ಆರ್.ಪುರಂ ಕಡೆ ತೆರಳುತ್ತಿದ್ದ ಆಪ್ ಉಪಾಧ್ಯಕ್ಷ ಗಿರೀಶ್ ಕುಮಾರ್ ನಾಯ್ಡುರನ್ನು ತಡೆದ ಅಪರಿಚಿತ ಯುವಕರು ತಗಾದೆ ತೆಗೆದು ಮದ್ಯದ ಬಾಟಲಿಯಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಾರ್ಥೀಬನ್ ಎಂಬವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. 

ಶನಿವಾರ ತಡರಾತ್ರಿ ಕೆ.ಆರ್. ಪುರಂ ಮಾರ್ಗವಾಗಿ ಸಾಗುತ್ತಿದ್ದಾಗ ಗಿರೀಶ್ ನಾಯ್ಡು ಅವರಿದ್ದ ಕಾರನ್ನು ತಡೆದು ನಿಂದಿಸಲು ಆರಂಭಿಸಿದ್ದಾರೆ. ಏಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ತಮ್ಮ ಕೈಯ್ಯಲ್ಲಿದ್ದ ಬಾಟಲ್ ಅನ್ನು ನೆಲಕ್ಕೆ ಹೊಡೆದು ಗಿರೀಶ್ ಕುಮಾರ್ ಮತ್ತವರ ಜೊತೆಯಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿದರು. ಜೊತೆಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಗಿರೀಶ್ ಕುಮಾರ್ ನಾಯ್ಡುರ ಸ್ನೇಹಿತ ಪಾರ್ಥೀಬನ್ ನೀಡಿರುವ ದೂರಿನನ್ವಯ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ ದಾಖಲಾಗಿದೆ.

Similar News