ಕಾಂಗ್ರೆಸ್ ಸೇರಿದ ದಲಿತ ಸಂಘಟನೆ ಮುಖಂಡರು

Update: 2023-03-21 11:42 GMT

ಬೆಂಗಳೂರು, ಮಾ. 21: ದಲಿತ ಪರ ಹೋರಾಟದಲ್ಲಿ ತೊಡಗಿರುವ ಬಿ.ಗೋಪಾಲ್, ಅಂಬಣ್ಣ ಅರೋಲಿಕರ್, ಹೆಣ್ಣೂರು ಶ್ರೀನಿವಾಸ್ ಸೇರಿದಂತೆ ದಲಿತ ಸಮುದಾಯದ ಹಲವು ಮುಖಂಡರು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡರಿಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ಬಳಿಕ ಮಾತನಾಡಿದ ಸುರ್ಜೇವಾಲಾ, ‘ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರ ಹಕ್ಕಿಗಾಗಿ ನಿರಂತರ ಹೋರಾಡುತ್ತಾ ಬಂದಿದೆ. ಈ ಕಾರ್ಯವನ್ನು ಪಕ್ಷದಿಂದ ಹೊರಗಿರುವ ಇತರೆ ರಾಜಕೀಯ ನಾಯಕರು ವಿಮರ್ಶಿಸುವ ಕಾರ್ಯ ಮಾಡಿದ್ದಾರೆ. ನಾವು ನಡೆದುಕೊಂಡು ಹೋಗುತ್ತಿರುವ ಹಾದಿ ಸರಿಯಾಗಿಲ್ಲ ಎಂದು ದೂರಿದ್ದಾರೆ. ಆದರೆ, ನಾವು ಎಸ್‍ಸಿ-ಎಸ್‍ಟಿ ವರ್ಗದವರಿಗೆ ಸಾಕಷ್ಟು ಅನುಕೂಲ ಮಾಡಿದ್ದೇವೆ’ ಎಂದರು.

‘ಬಿಜೆಪಿ ಸರಕಾರ ದಲಿತರಿಗೆ ಮೋಸ ಮಾಡಿದೆ. ಸದನದಲ್ಲಿಯೇ ಪರಿಶಿಷ್ಟರಿಗೆ ಸದನದಲ್ಲೇ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಆದರೆ ಈಗ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರ ಕುರಿತು ಕರ್ನಾಟಕದಿಂದ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಸಂಸತ್‍ನಲ್ಲಿಯೇ ಕೇಂದ್ರ ಸಚಿವರು ಹೇಳಿದ್ದಾರೆ. ಇಂಥದೊಂದು ದೊಡ್ಡ ಮೋಸಕ್ಕೆ ನಾವು ದನಿ ಎತ್ತಬೇಕು. ಸಂವಿಧಾನದ 9ನೆ ಶೆಡ್ಯೂಲ್‍ಗೆ ಈ ವಿಚಾರವನ್ನು ಸೇರಿಸುವಂತೆ ನಾವು ಒತ್ತಾಯ ಮಾಡಿದ್ದೆವು. ಆದರೆ ಬಿಜೆಪಿ ಸರಕಾರ ಈ ಕಾರ್ಯವನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ದಲಿತರ ಸಮಸ್ಯೆಗಳ ವಿರುದ್ಧ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅನೇಕ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಿದ್ದೇವೆ. ಸರಕಾರಕ್ಕೆ ಎಚ್ಚರಿಸುವ ಕಾರ್ಯ ಮಾಡುವ ಜೊತೆಗೆ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಿರ್ಮಿಸಿದ ದಲಿತ ಸಮುದಾಯಗಳ ಒಕ್ಕೂಟದ ಬಿ.ಗೋಪಾಲ್, ಅಂಬಣ್ಣ, ಹೆಣ್ಣೂರು ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ಹೊರಗಡೆ ಇದ್ದು ದಲಿತರ ಪರವಾಗಿ ಹೋರಾಟ ನಡೆಸಿದರು. ತಮ್ಮ ಹೋರಾಟಕ್ಕೆ ಬೆಲೆ ಸಿಗಬೇಕಾದರೆ ಅದು ಕಾಂಗ್ರೆಸ್‍ನಿಂದ ಮಾತ್ರ ಎಂಬುದು ಅರಿವಾಗಿದೆ. ಇದರಿಂದಾಗಿ ನಮ್ಮನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂಬ ಧ್ಯೇಯ ಕಾಂಗ್ರೆಸ್‍ಗೆ ಇದ್ದು ಇವರನ್ನು ಮುಕ್ತವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದರು.

ಬಿಜೆಪಿಯವರು ಹಿಂ.ವರ್ಗದವರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಿಕೊಂಡು ಬಂದಿದ್ದಾರೆ. ಇವರನ್ನು ಸಂಪೂರ್ಣ ಹತ್ತಿಕುವ ಯತ್ನವನ್ನು ಮಾಡುತ್ತಿದ್ದಾರೆ. ಇಂದು ಲೋಕಸಭೆ ಸದನದಲ್ಲಿ ಇಂಥದ್ದೇ ಸನ್ನಿವೇಶ ನಡೆದಿದೆ. ಹೊಸ ವಿಚಾರ ಗಮನಕ್ಕೆ ಬಂದಿದೆ. ದಲಿತರಿಗೆ ಮೀಸಲಾತಿ ಹೆಚ್ಚಿಸುತ್ತೇವೆಂದು ಕರ್ನಾಟಕದಲ್ಲಿ ಘೋಷಣೆ ಮಾಡುತ್ತಾರೆ. ನಾವು ದಲಿತರಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದಿದ್ದಾರೆ. ಆದರೆ, ಮುಖ್ಯಮಂತ್ರಿ ಜನರಿಗೆ ಮೋಸ ಮಾಡಿರುವುದು ಬಯಲಾಗಿದೆ. ಈ ಮೋಸದ ವಿರುದ್ಧ ಧ್ವನಿ ಎತ್ತಬೇಕೆಂದು ದಲಿತ ಸಮುದಾಯಕ್ಕೆ ಮನವಿ ಮಾಡುತ್ತೇನೆ. ನಾವು ಮೀಸಲಾತಿ ವಿಚಾರ ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕು. ಇದು ನಮ್ಮ ಹಕ್ಕಿನ ಪ್ರಶ್ನೆ ಎಂದು ಪರಮೇಶ್ವರ್ ತಿಳಿಸಿದರು. ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ, ಮಾಜಿ ಸಚಿವ ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಉಪಸ್ಥಿತರಿದ್ದರು.

ಮೀಸಲಾತಿ ವಿಚಾರದಲ್ಲಿ ಅನ್ಯಾಯ: ‘ರಾಜ್ಯ ಸರಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಕನಿಷ್ಠ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸದೆ ದಲಿತ ಸಮುದಾಯಗಳಿಗೆ ದೊಡ್ಡ ಮೋಸ ಮಾಡಿದ್ದು, ಶೇ.50 ರಿಂದ ಶೇ.56ಕ್ಕೆ ಮೀಸಲಾತಿ ಹೆಚ್ಚಿಸುವ ಕಾರ್ಯವಾಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಬಿಜೆಪಿಯ ಸಚಿವರು, ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು’

-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಉಸ್ತುವಾರಿ

Similar News