ದೇರಳಕಟ್ಟೆ: ಮಾ 26ರಂದು ಕಣಚೂರು ಮೋನು ಅವರಿಗೆ ಹುಟ್ಟೂರು ನಾಗರಿಕ ಸನ್ಮಾನ, ಸೌಹಾರ್ದ ಇಫ್ತಾರ್ ಕೂಟ

Update: 2023-03-23 08:01 GMT

ಉಳ್ಳಾಲ; ಡಾ.ಹಾಜಿ ಯು.ಕೆ.ಮೋನು ಹುಟ್ಟೂರು ನಾಗರಿಕ ಸನ್ಮಾನ ಸಮಿತಿ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಹಾಜಿ ಯು.ಕೆ ಮೋನು ಕಣಚೂರು ಅವರಿಗೆ ಹುಟ್ಟೂರು ನಾಗರಿಕ ಸನ್ಮಾನ ಹಾಗೂ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವು ಮಾ.26 ಭಾನುವಾರ ಸಂಜೆ 4 ಗಂಟೆಗೆ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಸನ್ಮಾನ ಸಮಿತಿ ಅಧ್ಯಕ್ಷ ಕಲ್ಲಿಮಾರ್ ರವೀಂದ್ರ ರೈ ಹೇಳಿದ್ದಾರೆ.

ತೊಕ್ಕೊಟ್ಟು ಪ್ರೆಸ್ ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಸಭಾ ವಿಪಕ್ಷ ಉಪನಾಯಕ, ಶಾಸಕ ಯುಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಿಟ್ಟೆ ಕುಲಾಧಿಪತಿ ಡಾ.ವಿನಯ ಹೆಗ್ಡೆ ಉದ್ಘಾಟಿಸಲಿದ್ದಾರೆ ಎಂದರು.

ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ತಲಪಾಡಿ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ, ಡಾ.ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್, ಪನೀರ್ ಚರ್ಚ್ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೊ ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಸನ್ಮಾನ ಸಮಿತಿ ಸಂಚಾಲಕ ಹೈದರ್ ಪರ್ತಿಪ್ಪಾಡಿ ಅಭಿನಂದನಾ ಭಾಷಣ ಮಾಡಲಿದ್ದು, ಇದರ ಬಳಿಕ ಸೌಹಾರ್ದ ಇಫ್ತಾರ್ ಕೂಟ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಣಚೂರು ಅಭಿಮಾನಿ ಬಳಗದ ಅಧ್ಯಕ್ಷ ಹರಿಕೃಷ್ಣ ಪುನರೂರು, ಸನ್ಮಾನ ಸಮಿತಿ ಸಂಚಾಲಕ ಹೈದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ‌ಡಿ.ಐ. ಅಬೂಬಕರ್ ಕೈರಂಗಳ, ಗೌರವ ಸಲಹೆಗಾರ ಆಳ್ವಿನ್ ಡಿಸೋಜ ಉಪಸ್ಥಿತರಿದ್ದರು.

Similar News