ಮಾ.26ರಂದು ಕಣಚೂರು ಮೋನುರಿಗೆ ಹುಟ್ಟೂರ ನಾಗರಿಕ ಸನ್ಮಾನ: ಆಮಂತ್ರಣ ಪತ್ರಿಕೆ ಬಿಡುಗಡೆ

Update: 2023-03-24 09:01 GMT

ಮಂಗಳೂರು, ಮಾ.24: ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಹಾಜಿ ಯು.ಕೆ.ಮೋನು ಕಣಚೂರು ಅವರಿಗೆ ಹುಟ್ಟೂರ ನಾಗರಿಕ ಸನ್ಮಾನ ಮತ್ತು ಸೌಹಾರ್ದ ಇಫ್ತಾರ್ ಕೂಟವು ಮಾ.26ರಂದು ಸಂಜೆ ನಾಲ್ಕು ಗಂಟೆಗೆ  ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಯಲಿದೆ. ಸೌಹಾರ್ದ ಇಫ್ತಾರ್ ಕೂಟವನ್ನು ದೇರಳಕಟ್ಟೆ ಬಿಬಿಸಿ ಹಾಲ್ ನಲ್ಲಿ ಆಯೋಜಿಸಲಾಗುತ್ತದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸಾಮಾಜಿಕ ಧುರೀಣ ಪ್ರಸಾದ್ ರೈ ಕಲ್ಲಿಮಾರ್  ಬಿಡುಗಡೆಗೊಳಿಸಿದರು.

ಸಮಿತಿಯ ಸಂಚಾಲಕ ಹೈದರ್ ಪರ್ತಿಪ್ಪಾಡಿ ಮತ್ತು ಅಧ್ಯಕ್ಷ ಕಲ್ಲೀಮಾರ್ ರವೀಂದ್ರ ರೈ ಕಾರ್ಯಕ್ರಮದ ರೂಪುರೇಷೆಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಲಯನ್ ಚಂದ್ರಹಾಸ ಶೆಟ್ಟಿ ಮಾತನಾಡಿ, ಕಣಚೂರು ಮೋನು ಹಾಜಿಯವರು ನಮ್ಮ ನಾಡಿನ ಒಂದು ಶಕ್ತಿಯಾಗಿದ್ದಾರೆ, ಸತತ ಸಾಧನೆಯಿಂದ ಮೇಲೆ ಬಂದವರು, ಇಂತಹ ಧೀಮಂತ ವ್ಯಕ್ತಿ ನಾಡಿನಲ್ಲಿ ನೇತೃ ಸ್ಥಾನದಲ್ಲಿರುವುದು ಸಾಮರಸ್ಯದ ಬಾಳ್ವೆಗೆ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಲ್ವಿನ್ ಡಿಸೋಜ, ಬೆಳ್ಮ ಪಂಚಾಯತ್ ಅಧ್ಯಕ್ಷ ಸಿ.ಎಂ.ಸತ್ತಾರ್, ಮಾಜಿ ಅಧ್ಯಕ್ಷರಾದ ಹಾಜಿ ಯೂಸುಫ್ ಬಾವ ಹಾಗೂ ಉಸ್ಮಾನ್ ಅಕ್ಸಾ, ಕೊಣಾಜೆ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಮುಂತಾದವರು ಶುಭ ಹಾರೈಸಿದರು.

ಪ್ರಧಾನ ಕಾರ್ಯದರ್ಶಿ  ಡಿ.ಐ.ಅಬೂಬಕರ್ ಕೈರಂಗಳ ಸ್ವಾಗತಿಸಿದರು. ತ್ಯಾಗಂ ಹರೇಕಲ ಪ್ರಾಸ್ತಾವಿಕ ಭಾಷಣ ಮಾಡಿದರು. ನಾಸಿರ್ ಸಾಮಣಿಗೆ ವಂದಿಸಿದರು.

Similar News