ಬೆಂಗಳೂರು: ಮಹಿಳೆಯ ಕೈ ಕತ್ತರಿಸಿ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳ ಬಂಧನ

Update: 2023-03-26 15:21 GMT

ಬೆಂಗಳೂರು: ಸರ ಕದಿಯಲು ಬಂದು ಮಹಿಳೆಯ ಕೈಯನ್ನೇ ಕತ್ತರಿಸಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರನ್ನು ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಮನೋಜ್ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ಅವರು ತಿಳಿಸಿದ್ದಾರೆ. 

ಮಾ.6ರಂದು ಬೆಳಗ್ಗೆ ಪುಟ್ಟೇನಹಳ್ಳಿ ಕೆರೆ ಬಳಿ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯು ಗುರಿಯಾಗಿಸಿಕೊಂಡು ಬೈಕ್‍ನಲ್ಲಿ ಹಿಂಬಾಲಿಸಿ ಕೊಂಡು ಬಂದು ಚಿನ್ನ ಸರ ಕಸಿಯಲು ಹೋದಾಗ ಪ್ರತಿರೋಧ ಒಡ್ಡಿದಕ್ಕೆ ಮಹಿಳೆಯ ಕೈ ಕತ್ತರಿಸಿದ್ದರು.  ಆದರೂ, ಚಿನ್ನದ ಸರ ಕಳ್ಳರ ಪಾಲಾಗಲು ಬಿಡದ ಮಹಿಳೆ ನೋವಿನಲ್ಲೂ ಖದೀಮರ ವಿರುದ್ಧ ಹೋರಾಡಿದ್ದರು. ಬಳಿಕ ಚಿನ್ನದ ಸರ ತಮಗೆ ಸಿಗುವುದಿಲ್ಲ ಎಂದುಕೊಂಡ ಆರೋಪಿಗಳು ಬರಿಗೈಯಲ್ಲಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪುಟ್ಟೇನಹಳ್ಳಿ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. 

Similar News