97 ಕೋಟಿ ರೂ.ವಂಚನೆ ಆರೋಪ: ಸಚಿವ ಭೈರತಿ ಬಸವರಾಜ್ ಸೇರಿ 10 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2023-03-27 16:04 GMT

ಬೆಂಗಳೂರು, ಮಾ.27: ಕಟ್ಟಡ ನಿರ್ಮಾಣ ಮಾಡದೆ ಕಾಗದದಲ್ಲಿ ಕಾಮಗಾರಿ ನಡೆಸಿರುವುದಾಗಿ ದಾಖಲಾತಿ ಸೃಷ್ಟಿಸಿ 97 ಕೋಟಿ ರೂ.ವಂಚನೆ ಮಾಡಿರುವ ಆರೋಪ ನಗರಾಭಿವೃದ್ಧಿ ಸಚಿವ ಹಾಗೂ ಕೆಆರ್ ಪುರ ಶಾಸಕ ಭೈರತಿ ಬಸವರಾಜ್ ವಿರುದ್ಧ ಕೇಳಿಬಂದಿದೆ.

ಭೈರತಿ ಬಸವರಾಜ್, ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಹಾಗೂ ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ 10 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. 

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ಅವರು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರದಿಂದ ಕೋಟ್ಯಂತರ ರೂಪಾಯಿ ಹಣ ಮಂಜೂರು ಮಾಡಿಸಿ ಕಾಮಗಾರಿ ನಡೆಸದೆ ಎಲ್ಲವೂ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ ಮಾಡಿಸಿರುವುದಾಗಿ ದಾಖಲೆ ಸೃಷ್ಟಿಸಿ 97 ಕೋಟಿ ರೂಪಾಯಿ ವಂಚಿಸಿದ್ದಾರೆ. ವಂಚನೆ ಜಾಲದ ಹಿಂದೆ ಪ್ರಮುಖವಾಗಿ ಸಚಿವ ಭೈರತಿ ಬಸವರಾಜ್ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಕೆಆರ್ ಪುರ ಕ್ಷೇತ್ರಕ್ಕೆ ಇದುವರೆಗೂ ಬಿಬಿಎಂಪಿಗೆ ಸಂಬಂಧಿಸಿದಂತೆ 1883 ಕಾಮಗಾರಿಗಳಿಗೆ 488 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ 97 ಕೋಟಿ ರೂಪಾಯಿ ಕಾಮಗಾರಿಗಳಿಗೆ ನಿರ್ಮಾಣ ಮಾಡದೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ 373 ಮಂದಿ ಗುತ್ತಿಗೆದಾರರಿದ್ದಾರೆ. 155 ಮಂದಿ ಗುತ್ತಿಗೆದಾರರಿಗೆ ಒಂದು ಗುತ್ತಿಗೆ ನೀಡಿದರೆ 78 ಮಂದಿ ಎರಡು ಗುತ್ತಿಗೆ ಹಾಗೂ 41 ಮಂದಿ ಮೂರು ಕಾಮಗಾರಿಗಳಿಗೆ ಆದೇಶ ಪಡೆದಿದ್ದಾರೆ.

ಮುಖ್ಯವಾಗಿ ಇನ್ನೂ 15 ಮಂದಿ ಗುತ್ತಿಗೆದಾರರಿಗೆ 848 ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ದೇವಸಂದ್ರ ವಾರ್ಡ್ ವೊಂದರಲ್ಲಿ ಶೌಚಾಲಯ ನಿರ್ಮಿಸದೆ ಅದರ ಹೆಸರಿನಲ್ಲಿ ಹಣ ಗುಳುಂ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದರು.

Similar News