ಬಜಪೆ: 2ಬಿ ಮಿಸಲಾತಿ ರದ್ದು ಖಂಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆ

Update: 2023-03-29 10:33 GMT

ಮಂಗಳೂರು,ಮಾ.29: ಬಿ.ಜೆ.ಪಿ ಸರಕಾರದ ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಮೀಸಲಾತಿಯನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ವತಿಯಿಂದ ಬಜಪೆ ಕಿನ್ನಿಪದವು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮೂಡಬಿದರೆ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಬಿ.ಜೆ.ಪಿ ಸರಕಾರದ ಧ್ವೇಷದ ಭಾಗವಾಗಿ 2ಬಿ ಮೀಸಲಾತಿಯನ್ನು ರದ್ದು ಪಡಿಸಿರುವುದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಧರ್ಮದವರು ಹಂತ ಹಂತವಾಗಿ ಈ ಸಮಸ್ಯೆಯನ್ನು ಅನುಭವಿಸಬೇಕಾಗಬಹುದು. ಅದಕ್ಕೂ ಮೊದಲೇ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಇನ್ನು ಜಾತ್ಯಾತೀತ ಎನಿಸಿಕೊಳ್ಳುವವರು ಇದರ ಬಗ್ಗೆ  ಮೌನ ವಹಿಸಿರುವುದು ದೇಶದ ಪ್ರಜಾಪ್ರಭುತ್ವದ ದುರಂತವಾಗಿದೆ ಎಂದರು.

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಅಡ್ಡೂರು ಮಾತನಾಡಿ ಬಿ.ಜೆ.ಪಿ ಕೋಮುವಾದದ ವಿರುದ್ಧ ನಾವು ತೀವ್ರ ಹೋರಾಟಗಳನ್ನು ಸಂಘಟಿಸಲಿದ್ದೇವೆ. ಮೀಸಲಾತಿ ರದ್ಧತಿ ವಿರುದ್ಧ ಹೈಕೋರ್ಟ್ ಮೊರೆ ಹೋಗಲಿದ್ದೇವೆ. ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ‌.ಪಿ.ಐ ಅಭ್ಯರ್ಥಿಗಳನ್ನು ಬೆಂಬಲಿಸಿ ವಿಜಯಗೊಳಿಸಿ, ಸದನದಲ್ಲಿ ಬಿ.ಜೆ.ಪಿ‌ ಯ ಕೋಮುವಾದವನ್ನು ಎದುರಿಸಲಿದ್ದೇವೆ ಎಂದರು.

ಪ್ರತಿಭಟನೆಯ ನೇತ್ರತ್ವವನ್ನು ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ವಹಿಸಿದ್ದರು. ಪ್ರತಿಭಟನೆಯಲ್ಲಿ ಮೂಡಬಿದರೆ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ನಿಸಾರ್ ಮರವೂರು, ಬಜಪೆ ಬ್ಲಾಕ್ ಅಧ್ಯಕ್ಷರಾದ ರಹೀಂ ಕಳವಾರು, ಕಾರ್ಯದರ್ಶಿ ನಝೀರ್ ಬಜ್ಪೆ, ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ಉಪಸ್ಥಿತರಿದ್ದರು.

Similar News