ಕಡಬ: ಪರೀಕ್ಷೆ ಸಿದ್ಧತೆಯಲ್ಲಿದ್ದ ಎಸೆಸೆಲ್ಸಿ ವಿದ್ಯಾರ್ಥಿಯ ಮೃತದೇಹ ನದಿಯಲ್ಲಿ ಪತ್ತೆ

Update: 2023-03-30 07:47 GMT

ಕಡಬ, ಮಾ.30: ಕಳೆದ ದಿನ ಟ್ಯೂಷನ್ ಗೆಂದು ತೆರಳಿ ನಾಪತ್ತೆಯಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿಯ ಮೃತದೇಹವು ಗುರುವಾರ ನಾಕೂರು ಎಂಬಲ್ಲಿನ ಕುಮಾರಧಾರಾ ನದಿಯಲ್ಲಿ ಗುರುವಾರ ಪತ್ತೆಯಾಗಿದೆ.

ಕಡಬದ ಖಾಸಗಿ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ಅದ್ವೈತ್ ಮೃತ ಬಾಲಕ. ಬುಧವಾರ ಟ್ಯೂಷನ್ ಗೆಂದು ಮನೆಯಿಂದ ತೆರಳಿದ್ದ ಈತ ಮನೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಕಂಡುಬಂದಿದೆ., ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದಾಗ ಮೃತದೇಹವು ಪತ್ತೆಯಾಗಿದೆ.

ನಾಳೆಯಿಂದ ಆರಂಭಗೊಳ್ಳಲಿರುವ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆಯಲ್ಲಿ ತೊಡಗಿದ್ದ ಅದ್ವೈತ್ ಪರೀಕ್ಷಾ ಭಯದಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News