ಮಂಗಳೂರು: ಮಾದಕ ವಸ್ತು ಸೇವನೆ ಆರೋಪ; 6 ಮಂದಿ ಸೆರೆ

Update: 2023-03-31 16:06 GMT

ಮಂಗಳೂರು, ಮಾ.31: ನಗರ ಪೊಲೀಸ್ ಕಮಿಷನರೆಟ್‌ನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಸನ್ನಿಧಿ ಎಂಬಲ್ಲಿನ ರಸ್ತೆ ಬದಿ ಗಾಂಜಾ ಸೇವನೆ ಮಾಡುತ್ತಿದ್ದ ಶ್ರೀನಿವಾಸ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಂತೂರು ಜಂಕ್ಷನ್ ಬಳಿಯ ಬಸ್ ತಂಗುದಾಣದಲ್ಲಿ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಯುವಕನನನ್ನು ಶುಕ್ರವಾರ ಬಂಧಿಸಲಾಗಿದೆ.

ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಮುಹಮ್ಮದ್ ಸೈಫ್ (22) ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಲೋವರ್ ಕಾರ್‌ಸ್ಟ್ರೀಟ್ ಬಳಿ ಅನೀಶ್ ಅಶ್ರಫ್ (25) ಎಂಬಾತ ಗಾಂಜಾ ಸೇವನೆ ಮಾಡುತ್ತಿದ್ದಾಗ ಬಂದರು ಪೊಲೀಸರು ಬಂಧಿಸಿದ್ದಾರೆ. ಕೋಡಿಕೆರೆ ನಿವಾಸಿ ರೌಡಿಶೀಟರ್ ಲೋಕೇಶ್ ಎಂಬಾತನ ಚಲನ ವಲನ ಗಮನಿಸಲು ಆತನ ಮನೆಗೆ ಹೋಗಿದ್ದ ಪೊಲೀಸರಿಗೆ ಆತ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ನಗರದ ಜಪ್ಪು ಮೊರ್ಗನ್ಸ್‌ಗೇಟ್ ಭಾರತ್ ಮೈದಾನದ ಬಳಿ ಎಮ್ಮೆಕೆರೆಯ ಅಮಿತ್ ರಾಜ್ ಶೆಟ್ಟಿ (33) ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ ಬಗ್ಗೆ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News