ತಲಪಾಡಿ: ದಾಖಲೆ ಇಲ್ಲದೆ ಹಣ ಸಾಗಾಟ; ಕಾರು ಸಹಿತ ನಗದು ವಶಕ್ಕೆ

Update: 2023-04-01 16:11 GMT

ಉಳ್ಳಾಲ: ಕೇರಳದಿಂದ ದಾಖಲೆಗಳಿಲ್ಲದೆ ಹಣ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆ ಹಿಡಿದ ಉಳ್ಳಾಲ ಪೊಲೀಸರು 7.95 ಲಕ್ಷ ರೂ. ನಗದು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಕುತ್ರಿಕ್ಕೋಡು ನಿವಾಸಿ ಸುರೇಶ್ ಎಂಬಾತನಿಂದ ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳ ಲಾಗಿದೆ. ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿ ವಾಹನ ತಪಾಸಣೆಗೈಯ್ಯುತ್ತಿದ್ದಾಗ ನಗದು ಪತ್ತೆಯಾಗಿದೆ. ಚುನಾವಣಾ ಆಯೋಗದ ರಿಟೈನಿಂಗ್ ಅಧಿಕಾರಿಗಳಿಗೆ ನಗದು ಹಾಗೂ ಕಾರನ್ನು ವಿಚಾರಣೆಗೆ ನೀಡಲಾಗಿದೆ.

ಸುರೇಶ್ ಫ್ಯಾಬ್ರಿಕೇಷನ್ ವೃತ್ತಿ ನಡೆಸುತ್ತಿದ್ದು, ಮಂಗಳೂರಿನ ಬಂದರಿನಿಂದ ಸಾಮಗ್ರಿಗಳ ಖರೀದಿಗಾಗಿ ಹಣ ತರುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಹಣವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Similar News