×
Ad

ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಅಂತ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ: ಡಿ.ಕೆ. ಶಿವಕುಮಾರ್

'ಕಳೆದ ಬಾರಿಯೇ ನನ್ನ ನಾಮಪತ್ರ ತಿರಸ್ಕರಿಸಲು ಮುಂದಾಗಿದ್ದರು...''

Update: 2023-04-21 13:58 IST

ಬೆಂಗಳೂರು: ‘ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆದಿದ್ದು, ರಾಜಕೀಯದಿಂದ ನನ್ನನ್ನು ದೂರಮಾಡಲು ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಕೆ. ಸುರೇಶ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಈಗಿನ ತಂತ್ರಜ್ಞಾನದಲ್ಲಿ ಯಾರು ಮಾಹಿತಿ ನೋಡುತ್ತಾರೆ, ಡೌನ್ಲೋಡ್ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿ ಸಿಗುತ್ತದೆ. ಬಿಜೆಪಿ ಸೆಲ್ ನನ್ನ ದಾಖಲೆ ಪರಿಶೀಲಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರಿಗಳ ದುರ್ಬಳಕೆಗೆ ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ನಾವು ಜಾಗರೂಕವಾಗಿ ಹೆಜ್ಜೆ ಇಟ್ಟಿದ್ದೇವೆ' ಎಂದು ತಿಳಿಸಿದರು. 

'ನನಗೆ ಅರ್ಜಿ ಹೇಗೆ ತುಂಬಬೇಕು ಗೊತ್ತಿದೆ. ನನ್ನ ದಾಖಲೆಗಳು ಸರಿಯಾಗಿವೆ. ನನ್ನ ಅರ್ಜಿ ಸ್ವೀಕೃತವಾಗಿರಲಿದೆ ಎಂಬ ನಂಬಿಕೆ ಇದೆ. ಆದರೆ ಬಿಜೆಪಿಯವರ ಷಡ್ಯಂತ್ರ ಏನುಬೇಕಾದರೂ ಆಗಬಹುದು. ಕಳೆದ ಬಾರಿಯೇ ನನ್ನ ಅರ್ಜಿ ತರಸ್ಕರಿಸಲು ಮುಂದಾಗಿದ್ದರು. ಆದರೆ ನಾನು ಐಟಿ ಅಧಿಕಾರಿಗಳ ಮುಂದೆ ಹೋಗಿ ಎಲ್ಲ ಮಾಹಿತಿ ನೀಡಿದೆ. ಅವರು ನನಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿವೆ. ಕಳೆದ 15 ವರ್ಷಗಳಲ್ಲಿ ನಾನು ಒಂದು ಮನೆ ಬಿಟ್ಟರೆ ಉಳಿದಂತೆ ಯಾವುದೇ ಆಸ್ತಿ ಖರೀದಿ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು. 

'ನನಗೆ ಬೇಕಾದಷ್ಟು ಅಧಿಕಾರಿಗಳು, ಮಾಧ್ಯಮ ಸ್ನೇಹಿತರು ಇದ್ದು, ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ನನ್ನ ಮೇಕೆದಾಟು, ಭಾರತ ಜೋಡೋ ಯಾತ್ರೆ, ಸ್ವಾತಂತ್ರ್ಯ ನಡಿಗೆ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಭ್ರಷ್ಟಾಚಾರ, ಕೋವಿಡ್ ಭ್ರಷ್ಟಾಚಾರ ಬಗ್ಗೆ ನನ್ನ ಅವಧಿಯಲ್ಲಿ ದೊಡ್ಡ ಹೋರಾಟ ನಡೆದು ಮಂತ್ರಿ ರಾಜೀನಾಮೆ ನೀಡಬೇಕಾಯಿತು. ಈತನಿಂದ ಈ ಪರಿಸ್ಥಿತಿ ಬಂದಿದೆ ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಏನೇ ಕುತಂತ್ರ ಪ್ರಯೋಗ ಮಾಡಿದರೂ ನಾನು ನ್ಯಾಯಾಲಯ ಹಾಗೂ ಜನರ ತೀರ್ಪು ನಂಬಿದ್ದೇನೆ' ಎಂದು ತಿಳಿಸಿದರು. 

'ಯಡಿಯೂರಪ್ಪ ಅವರ ಸರ್ಕಾರ ಬೇರೆಯವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ನೀಡದೇ, ಕೇವಲ ನನ್ನ ಪ್ರಕರಣ ಮಾತ್ರ ನೀಡಿದ್ದಾರೆ. ಅಡ್ವಕೇಟ್ ಜೆನರಲ್ ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಹೇಳಿದ್ದರೂ ದೆಹಲಿಯವರ ಒತ್ತಡದಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ರಾಜಕೀಯದಿಂದಲೇ ನನ್ನನ್ನು ತೆಗೆದುಹಾಕಲು ಷಡ್ಯಂತ್ರ ರೂಪಿಸಿದ್ದಾರೆ' ಎಂದು ಹೇಳಿದರು. 

'7 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ ರಾಹುಲ್ ಗಾಂಧಿ ಅವರನ್ನು ಒಂದು ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿ ಕೇವಲ 22 ದಿನಗಳಲ್ಲಿ ವಿಚಾರಣೆ ಮಾಡಿ ಅವರಿಗೆ ಇದುವರೆಗೂ ಯಾರಿಗೂ ನೀಡದ ಶಿಕ್ಷೆ ಪ್ರಕಟಿಸಿ, 24 ಗಂಟೆಗಳಲ್ಲಿ ಅವರ ಸಂಸತ್ ಸದಸ್ಯತ್ವ ರದ್ದು ಮಾಡಿ, ಅವರ ಮನೆ ಖಾಲಿ ಮಾಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ್ದು, ಅವರಿಂದ ಮನೆ ಕಿತ್ತುಕೊಂಡಿದ್ದಕ್ಕೆ ಅವರು ಬೇಸರವಾಗುವುದಿಲ್ಲ. ಅವರಿಗೆ ಸಣ್ಣ ಕೊಠಡಿ ಇದ್ದರೂ ಸಾಕು. ಭಾರತ ಜೋಡೊ ಯಾತ್ರೆ ಸಮಯದಲ್ಲಿ ಅವರು ಕೇವಲ ವ್ಯಾನ್ ನಲ್ಲಿ ಮಲಗಿ 6 ತಿಂಗಳ ಕಾಲ ಪಾದಯಾತ್ರೆ ಮಾಡಿದ್ದಾರೆ. ಸರಳತೆಯಲ್ಲಿ ಬದುಕುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಯಾವುದೇ ಅಕ್ರಮ ಮಾಡದಿದ್ದರೂ ಯಂಗ್ ಇಂಡಿಯಾ ಸೇರಿದಂತೆ ಅನೇಕ ಪ್ರಕರಣ ದಾಖಲಿಸಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅವರನ್ನೇ ಬಿಟ್ಟಿಲ್ಲ ನನ್ನನ್ನು ಬಿಡುತ್ತಾರಾ?’ ಎಂದು ಪ್ರಶ್ನಿಸಿದರು. 
 
ನಾಮಪತ್ರ ತಿರಸ್ಕೃತ ಆಗುವ ಭಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾಮಪತ್ರ ತಿರಸ್ಕರಿಸುವ ಷಡ್ಯಂತ್ರ, ಕುತಂತ್ರ ನಡೆಯುತ್ತಿದೆ. ಅವರು ಏನಾದರೂ ಮಾಡಲಿ, ನನ್ನನ್ನು ಬಂಡೆ ಎಂದು ನೀವೆಲ್ಲರೂ ಹೇಳಿದ್ದೀರಿ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ’ ಎಂದರು.

Similar News