ಪ್ರಮೋದ್ ಮುತಾಲಿಕ್ ಡೀಲ್ ಮಾಸ್ಟರ್, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ: ಸುನಿಲ್ ಕುಮಾರ್ ಆರೋಪ
ಕಾರ್ಕಳದಲ್ಲಿ ಬಿಜೆಪಿ ವಿಜಯೋತ್ಸವ
ಕಾರ್ಕಳ: ಕಾಂಗ್ರೆಸ್ ಜತೆ ಸೇರಿಕೊಂಡು ಹಣ ಪಡೆದು ಬಿಜೆಪಿಯ ವಿರುದ್ಧ ಕಾರ್ಕಳದಲ್ಲಿ ಸ್ಪರ್ಧಿಸಿ ಸೋತಿರುವ ಪ್ರಮೋದ್ ಮುತಾಲಿಕ್ ಓರ್ವ ಡೀಲ್ ಮಾಸ್ಟರ್, ಹಣಕ್ಕಾಗಿ ಅವರು ಏನು ಬೇಕಾದರೂ ಮಾಡುವ ಮನಸ್ಥಿತಿಯುಳ್ಳವರು ಎಂದು ಸುನಿಲ್ ಕುಮಾರ್ ಮುತಾಲಿಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಮೋದ್ ಮುತಾಲಿಕ್ ಅವರ ಟೈಗರ್ ಗ್ಯಾಂಗ್ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಮಾಡಿದೆ, ಹತ್ಯೆಯ ಟೈಗರ್ ಗ್ಯಾಂಗ್ ಇಂದಿಗೂ ಗುಲ್ಬರ್ಗ ಜೈಲಿನಲ್ಲಿದ್ದಾರೆ. ಚುನಾವಣೆ ನೆಪದಲ್ಲಿ ಎಷ್ಟು ಹಣ ವಸೂಲಿ ಮಾಡಿದ್ದೀರಿ ಎಂದು ಗೊತ್ತಿದೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದರು.
ಅವರು ಕಾರ್ಕಳ ಬಿಜೆಪಿ ವತಿಯಿಂದ ರವಿವಾರ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಾಗೂ ಪ್ರಮೋದ್ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ತನ್ನ 20 ನಿಮಿಷಗಳ ಭಾಷಣದಲ್ಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದರು ಮಾತ್ರವಲ್ಲದೇ ತಾನು ನಡೆದುಬಂದು ರಾಜಕೀಯದ ಹಾದಿ, ಜತೆಗೆ ಸಂಘಟನೆ, ಅಭಿವೃದ್ಧಿ ಕುರಿತು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳನ್ನು ಪಡೆದಿದ್ದು ಈ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಇದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾವು ಸಾಕಷ್ಟು ವಿಚಾರಗಳನ್ನು ಕಲಿಯಬೇಕಾಯಿತು ಎನ್ನುವ ಮೂಲಕ ಪಕ್ಷದೊಳಗಿನ ಹಿತಶತ್ರುಗಳ ಕುರಿತು ಉಲ್ಲೇಖಿಸಿದರು. ಕೇವಲ ಅಭಿವೃದ್ಧಿ ಮಾಡಿದರೆ ಸಾಲದು ಜತೆಗೆ ರಾಜಕಾರಣವನ್ನು ಮಾಡಬೇಕು ಎಂದು ಈ ಬಾರಿಯ ಚುನಾವಣೆ ಕಲಿಸಿಕೊಟ್ಟಿದೆ.ರಾಜಕೀಯದ ಚಿಲ್ಲರೆ ಅಪಪ್ರಚಾರಗಳಿಗೆ ಬೆಲೆ ಕೊಟ್ಟಿಲ್ಲ, ಕೈಗೆ ಬಳೆ ತೊಟ್ಟಿಲ್ಲ, ಸಂಘಟನೆ ಹೇಗೆ ಕಟ್ಟಬೇಕು, ವಿರೋಧಿಗಳನ್ನು ಹೇಗೆ ಎದುರಿಸಬೇಕೆಂದು ಗೊತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಈ ಬಾರಿಯ ಕಾಂಗ್ರೆಸ್ ಚುನಾವಣಾ ಪ್ರಚಾರ ಭಾಷಣದಲ್ಲಿ ಓರ್ವ ವ್ಯಕ್ತಿ ನನ್ನ ಕುರಿತು ತೇಜೋವಧೆ ಮಾಡಿದ್ದು ಆತನ ವಿರುದ್ಧ ಮಾನನಷ್ಟ ಕೇಸ್ ಹಾಕಿ ಎಂದು ಕಾರ್ಯಕರ್ತರು ಹೇಳಿದ್ದರು, ಆದರೆ ಆ ವ್ಯಕ್ತಿಗೆ ಮಾನವೇ ಇಲ್ಲದಿದ್ದರೆ ಮಾನನಷ್ಟ ಕೇಸ್ ಹೇಗೆ ಹಾಕುವುದು ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮತದಾರನ ತೀರ್ಪನ್ನು ಗೌರವಿಸಬೇಕಿತ್ತು ಆದರೆ ಮತದಾರರು ಹಣ, ಹೆಂಡಕ್ಕೆ ಮತ ಮಾರಾಟ ಮಾಡಿದ್ದಾರೆ ಎಂದು ಮತದಾರರನ್ನು ಅವಮಾನಿಸಿದೆ. ಚುನಾವಣೆಯಲ್ಲಿ ಟೀಕೆಗಳು ಸಹಜ ಆದರೆ ನನ್ನ ಹಾಗೂ ಕುಟುಂಬದ ವಿರುದ್ಧ ಕೆಟ್ಟದಾಗಿ ಟೀಕೆ ಮಾಡಿದರೂ ತಂದೆತಾಯಿ ಕಲಿಸಿದ ಸಂಸ್ಕೃತಿಯಿಂದ ಯಾರಿಗೂ ಕೆಟ್ಟದಾಗಿ ಟೀಕೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳು ಶಾಸಕನ ಕರ್ತವ್ಯ ಅದನ್ನು ಮಾಡಬೇಕೆನ್ನುವ ಕಾಂಗ್ರೆಸ್ಸಿಗರು 30 ವರ್ಷಗಳಿಂದ ಯಾಕೆ ಅಭಿವೃದ್ಧಿ ಮಾಡಿಲ್ಲ ಎಂದರು.
ಪ್ರಮೋದ್ ಮುತಾಲಿಕ್ ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋತರು, ಎಲ್ಲಾ ಕಡೆಗಳಲ್ಲಿ ಸೋತು ಡೀಲ್ ಕುದುರಿಸುವವರು. ಟೈಗರ್ ಗ್ಯಾಂಗ್ ಹೆಸರಿನಲ್ಲಿ ಉತ್ತರ ಕರ್ನಾಟಕ ದಲ್ಲಿ ಹಿಂದುಗಳ ಹತ್ಯೆಯನ್ನು ಮಾಡಿಸಿದ್ದಾರೆ, ಆ ಹತ್ಯೆ ಮಾಡಿದ ಕೊಲೆಗಡುಗರು ಈಗಲೂ ಗುಲ್ಬರ್ಗಾ ಜೈಲಿನಲ್ಲಿದ್ದಾರೆ. ದಾಖಲೆಗಳು ಬೇಕಾ ಎಂದು ಮುತಾಲಿಕ್ ಅವರನ್ನು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ಮೇಲೆ ನಂಬಿಕೆ ಹಾಗೂ ಕಾರ್ಕಳ ತಾಲೂಕಿನ ಅಭಿವೃದ್ಧಿಗೆ ಮತ ನೀಡಿದ್ದೀರಿ ಅದಕ್ಕಾಗಿ ಮತದಾರರಿಗೆ ಹಾಗೂ ಕಾರ್ಯಕರ್ತರ ಪರಿಶ್ರಮಕ್ಕೆ ಧನ್ಯವಾದ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕ್ಷೇತ್ರಾದ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿದರು.
ವಿಜಯಕುಮಾರ್, ಬೋಳ ಪ್ರಭಾಕರ್ ಕಾಮತ್, ಸಾಣೂರು ನರಸಿಂಹ ಕಾಮತ್, ಮಣಿರಾಜ ಶೆಟ್ಟಿ, ಕೆ.ಪಿ ಶೆಣೈ, ಕುಡುಪುಲಾಜೆ ಮಹೇಶ್ ಶೆಟ್ಟಿ ಬೆಳುವಾಯಿ ಸದಾನಂದ ಶೆಟ್ಟಿ, ರಾಮಚಂದ್ರ ಅಚಾರ್ಯ ಬಜಗೋಳಿ ರವೀಂದ್ರ ಶೆಟ್ಟಿ, ಸತೀಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ನಗರಾ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯಿಲಿ ಸ್ವಾಗತಿಸಿದರು.
ಕಾರ್ಕಳ ಅನಂತ ಶಯನದಿಂದ ಹೊರಟ ವಿಜಯೋತ್ಸವದ ಮೆರವಣಿಗೆ ಕಾರ್ಕಳ ಪುರಸಭೆ, ಮಾರಿಗುಡಿ, ಬಸ್ ನಿಲ್ದಾಣ, ಮೂರುಮಾರ್ಗ, ಎಸ್ ಜೆ ಅರ್ಕೆಡ್ , ರಥಬೀದಿ ಕಾರ್ಕಳ ವೆಂಕಟರಮಣ ದೇವಾಲಯ, ಗ್ಯಾಲಕ್ಸಿ ಮೂಲಕ ಸಾಲ್ಮರ ಮಾರ್ಗವಾಗಿ ಕಾರ್ಕಳ ಬಂಡಿಮಠ ಬಸ್ ನಿಲ್ದಾಣ ತಲುಪಿತು.