ಮಹಿಳೆಯರ ಮೇಲಿನ ದೌರ್ಜನ್ಯ; ಪರಿಹಾರ ಎಲ್ಲಿದೆ?

Update: 2023-05-19 19:30 GMT

ಕೋಚ್‌ಗಳು ಮತ್ತು ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರು ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮೂರು ತಿಂಗಳ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಿಲ್ಲಿಯಲ್ಲಿ ಹೋರಾಟ ನಡೆಸಿದ್ದರು. ಆ ಆರೋಪಗಳ ತನಿಖೆಗೆ ಎರಡೆರಡು ಸಮಿತಿಗಳನ್ನು ರಚಿಸಿದರು. ಒಂದು ಸಮಿತಿ ವರದಿ ಸಲ್ಲಿಸಿದ್ದರೂ, ಅದು ಬಹಿರಂಗವಾಗಿಲ್ಲ. ತನಿಖೆಯಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕುಸ್ತಿಪಟುಗಳು ಮತ್ತೆ ಬೀದಿಗೆ ಇಳಿದಿದ್ದಾರೆ. ಪೊಲೀಸರಿಗೆ ದೂರನ್ನೂ ನೀಡಿದ್ದಾರೆ, ನ್ಯಾಯ ಒದಗಿಸಿ ಎಂದು ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದು ಯಾವುದೂ ಅವರಿಗೆ ಪ್ರಯೋಜನವಾಗುತ್ತಿಲ್ಲ.

ಭಾರತದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಲ್ಲಿ ಶೇ. 30ಕ್ಕೂ ಹೆಚ್ಚು ಪ್ರಕರಣಗಳು ಪರಿಚಿತರಿಂದಲೇ ನಡೆದಿರುತ್ತದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದಲೂ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದ ಪ್ರಕರಣಗಳೂ ಇವೆ. ದೇಶದಲ್ಲಿ ಪ್ರತೀ ವರ್ಷ ದಾಖಲಾಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೆಲಸದ ಸ್ಥಳದಲ್ಲಿ ನಡೆಯುವ ಕೃತ್ಯಗಳ ಪ್ರಮಾಣ ಶೇ. 3ಕ್ಕಿಂತಲೂ ಹೆಚ್ಚು. ಕ್ರೀಡಾಕ್ಷೇತ್ರವೂ ಇದಕ್ಕೆ ಹೊರತಲ್ಲ. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ದೂರುಗಳು ದಾಖಲಾಗಿವೆ.

2022ರಲ್ಲಿ ಭಾರತದ 17 ವರ್ಷದೊಳಗಿನವರ ಮಹಿಳಾ ಫುಟ್ಬಾಲ್ ತಂಡದ ಕೋಚ್ ಅಲೆಕ್ಸ್ ಆ್ಯಂಬ್ರೋಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಯೂರೋಪ್ ಪ್ರವಾಸದ ವೇಳೆ ಅವರು ಆಟಗಾರ್ತಿಯರ ಜತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಲಾಗಿತ್ತು. ಅಷ್ಟೇ ಅಲ್ಲ ಮತ್ತೆ ಅದೇ ವರ್ಷದ 2022ರಲ್ಲಿ ಸ್ಲೊವೇನಿಯಾ ಪ್ರವಾಸದ ವೇಳೆ ರಾಷ್ಟ್ರೀಯ ಸೈಕ್ಲಿಂಗ್ ಕೋಚ್ ಆರ್.ಕೆ. ಶರ್ಮಾ ಅವರು ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಮಹಿಳಾ ಸೈಕ್ಲಿಸ್ಟ್ ಒಬ್ಬರು ದೂರು ನೀಡಿದ್ದರು.

2021ರಲ್ಲಿ ತಮಿಳುನಾಡು ಅತ್ಲೀಟ್ ಕೋಚ್ ಪಿ.ನಾಗರಾಜನ್ ಅವರು ತಮ್ಮ ಮೇಲೆ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು 19 ವರ್ಷದ ಅತ್ಲೀಟ್ ಒಬ್ಬರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇನ್ನೂ ಏಳು ಮಂದಿ ಅತ್ಲೀಟ್‌ಗಳು ಪಿ.ನಾಗರಾಜನ್ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಇವು ಯಾವ ಪ್ರಕರಣಗಳಿಗೂ ಸರಿಯಾದ ನ್ಯಾಯ ಒದಗಿಸಿಲ್ಲ.

ಹರ್ಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಮಹಿಳಾ ಅತ್ಲೆಟಿಕ್ ತರಬೇತುದಾರರೊಬ್ಬರು ಕಳೆದ ತಿಂಗಳು ಎಫ್‌ಐಆರ್ ದಾಖಲಿಸಿದ್ದರು. ಸಂದೀಪ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಅವರನ್ನು ಇನ್ನೊಂದು ಖಾತೆಯ ಸಚಿವರನ್ನಾಗಿ ನೇಮಕಮಾಡಲಾಯಿತು.
ಭಾರತೀಯ ಕ್ರೀಡಾ ಪ್ರಾಧಿಕಾರವು ದೇಶದ ಅತ್ಯುನ್ನತ ಕ್ರೀಡಾಸಂಸ್ಥೆಯಾಗಿದೆ. ದೇಶದ ಬೇರೆಲ್ಲಾ ಕ್ರೀಡಾ ಸಂಸ್ಥೆಗಳು ಈ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಕ್ರೀಡಾಸಂಸ್ಥೆಗಳಲ್ಲಿ ತಲೆದೋರುವ ಯಾವುದೇ ಕುಂದುಕೊರತೆಗಳು ಮತ್ತು ದೂರುಗಳನ್ನು ನಿರ್ವಹಿಸುವ ಹೊಣೆಯೂ ಈ ಸಂಸ್ಥೆಯದ್ದೇ ಆಗಿದೆ. 2010ರಿಂದ 2020ರ ಮಧ್ಯೆ ಈ ಪ್ರಾಧಿಕಾರಕ್ಕೆ ಲೈಂಗಿಕ ದೌರ್ಜನ್ಯ ಕುರಿತ ಒಟ್ಟು 45 ದೂರುಗಳು ಬಂದಿವೆ. ಇವುಗಳಲ್ಲಿ 29 ದೂರುಗಳನ್ನು ಕ್ರೀಡಾಪಟುಗಳು ತಮ್ಮ ಕೋಚ್‌ಗಳ ವಿರುದ್ಧವೇ ನೀಡಿದ್ದಾರೆ. ಆದರೆ ಇವು ಯಾವುದಕ್ಕೂ ಸರಿಯಾದ ನ್ಯಾಯ ಇವತ್ತಿಗೂ ಒದಗಿಸಿಲ್ಲ.

ಬೇಟಿ ಬಚಾವೋ, ಬೇಟಿ ಪಢಾವೋ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು, ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು ಎನ್ನುವುದು ಕೇವಲ ರಾಜಕೀಯ ನಾಯಕರ ಭಾಷಣಗಳಲ್ಲಿ ಮಾತ್ರ. ‘‘ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು’’ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಣ್ಣು ಮಕ್ಕಳ ಮೇಲೆ ಸತತವಾಗಿ ಲೈಂಗಿಕ ಶೋಷಣೆ ಆಗುತ್ತಿರುವ ಇಂತಹ ಘಟನೆಗಳ ಬಗ್ಗೆ ಯಾಕೆ ವೌನವಾಗಿದ್ದಾರೆ? ದೇಶಕ್ಕೆ ಚಿನ್ನ ತಂದುಕೊಟ್ಟ ಸಾಧಕಿಯರ ಮೇಲೆಯೇ ಈ ರೀತಿಯ ಶೋಷಣೆಗಳಾದರೆ ಇನ್ನೂ ಸಾಮಾನ್ಯ ಹೆಣ್ಣುಮಕ್ಕಳ ಪರಿಸ್ಥಿತಿ ಏನು?

ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಡಬ್ಲ್ಯುಎಪ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಂಸದ ಸ್ಥಾನದಿಂದ ಯಾಕೆ ಕೆಳಗಿಳಿಸಲಾಗುತ್ತಿಲ್ಲ?.
ದಿನದ 24 ಗಂಟೆಗಳೂ ಎರಡು ವರ್ಷದ ಹಸುಗೂಸಿನಿಂದ 80 ವರ್ಷದ ವೃದ್ಧೆಯರವರೆಗೂ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಹೀಗೆ ಒಂದಲ್ಲಾ ಒಂದು ಪ್ರಕರಣ ನಡೆಯುತ್ತಿರುವಾಗ ‘‘ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂದಕ್ಕೆ ಬರಬೇಕು, ಮಹಿಳೆಯರಿಗೆ ರಕ್ಷಣೆ ಕೊಡಬೇಕು’’ ಎಂದು ದೇಶದೆಲ್ಲೆಡೆ ಸಾರ್ವಜನಿಕ ಭಾಷಣಗಳಲ್ಲಿ ಹೇಳುವ ದೇಶದ ಪ್ರಧಾನ ಮಂತ್ರಿಗಳ ಮಾತುಗಳಿಗೆ ಬೆಲೆ ಇದೆಯೇ?
ಒಂದೊಮ್ಮೆ ಮನೆಯ 4 ಗೋಡೆಗಳ ಮಧ್ಯೆ ಬಂಧಿಯಾಗಿದ್ದ ದೇಶದ ಹೆಣ್ಣು ಮಕ್ಕಳು ದೇಶಕ್ಕೆ ಚಿನ್ನ ತಂದು ಕೊಡುವ ಸಾಧಕಿಯರಾಗಿದ್ದಾರೆ. ಆದರೂ ಅಂದಿನಿಂದ ಇಂದಿಗೂ ಮಹಿಳೆಯರಿಗೆ ಸುರಕ್ಷಿತ ವ್ಯವಸ್ಥೆ ಇಲ್ಲ ನಮ್ಮ ಈ ಸಮಾಜದಲ್ಲಿ.

ಮೂರು ತಿಂಗಳಿಂದ ಮಹಿಳಾ ಕುಸ್ತಿಪಟುಗಳು ಶರಣ್‌ಸಿಂಗ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೂ ಇಂತಹ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಏಕೆಂದು ದೇಶದ ಜನರಿಗೆ ತಿಳಿಯಬೇಕಾಗಿದೆ. ದೇಶದ ಹೆಣ್ಣು ಮಕ್ಕಳ ಮೇಲೆ ಸರಕಾರಕ್ಕೆ ನಿಜವಾದ ಗೌರವ ಇದ್ದರೆ ಕೂಡಲೇ ಕುಸ್ತಿಪಟುಗಳಿಗೆ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಂಸದರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಈ ಕುಸ್ತಿಪಟು ಹೆಣ್ಣು ಮಕ್ಕಳಿಗೆ ಸರಿಯಾದ ನ್ಯಾಯ ಒದಗಿಸಿ.

Similar News