"ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ನಡೆಗೆ" ಪುತ್ತಿಲ ಬೆಂಬಲಿಗರಿಂದ ಸೇವಾ ಸಮರ್ಪಣಾ ಕಾರ್ಯಕ್ರಮ

`ಪುತ್ತಿಲ ಪರಿವಾರ' ಲಾಂಚನ ಬಿಡುಗಡೆ

Update: 2023-05-21 16:10 GMT

ಪುತ್ತೂರು: ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಿಂದ `ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ನಡೆದ ಎಂಬ ಪಾದಯಾತ್ರೆ ಹಾಗೂ `ಸೇವಾ ಸಮರ್ಪಣಾ ಕಾರ್ಯಕ್ರಮ ರವಿವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಾರುಗದ್ದೆಯಲ್ಲಿ ನಡೆಯಿತು. ಈ ಸಂದರ್ಭ `ಪುತ್ತಿಲ ಪರಿವಾರ' ಲಾಂಚನ ಬಿಡುಡೆಗೊಳಿಸಲಾಯಿತು.

ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆಯಿಂದ ಮುಖ್ಯರಸ್ತೆಯಲ್ಲಿ ದೇವಸ್ಥಾನದ ಗದ್ದೆಗೆ ಪಾದಯಾತ್ರೆ ನಡೆಯಿತು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. 

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅವರು ಮೋದಿ ಅವರನ್ನು ಪಕ್ಷದ ಕಡೆಯಿಂದ ಪ್ರಧಾನಿಯಾಗಿ ಆಯ್ಕೆ ಮಾಡಿಲ್ಲ. ಬದಲಿಗೆ ದೇಶದ ಅಸಂಖ್ಯಾತ ಧ್ವನಿಗಳ ಕಾರಣದಿಂದ ಪ್ರಧಾನಿಯಾದರು. ಬಡ ಜನರ ಸೇವೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಎಲ್ಲದಕ್ಕೂ ಧೈವಬಲ ಕಾರಣವಾಗಿದೆ. ಅದೇ ರೀತಿ ದೈವ ಬಲ ಇರುವ ಕಾರಣಕ್ಕೆ ಪುತ್ತಿಲ ಅವರಿಗೆ ಈ ರೀತಿಯಾದ  ಜನರ ಪ್ರೀತಿ ಬೆಂಬಲ ಸಿಕ್ಕಿದೆ. ಇದೆಲ್ಲಾ ಶ್ರೀ ಮಹಾಲಿಂಗೇಶ್ವರನ ಸಂಕಲ್ಪ ಎಂದ ಅವರು ಅಭ್ಯರ್ಥಿಗಳು ಹಣ ಹಂಚುವ ದಿನದಲ್ಲಿ ಮತದಾರ ಹಣ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪುತ್ತಿಲ ಅವರು ಹಲವು  ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದರು.

ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಚುನಾವಣೆಗೆ ಸ್ಪರ್ಧಿಸುವಾಗ ಗೋ ಹತ್ಯೆ ಆಗುವುದಿಲ್ಲ. ಹಿಂದೂ ಸಹೋದರಿಯರ ಮಾನಭಂಗ ನಡೆಯುವುದಿಲ್ಲ. ಧಾರ್ಮಿಕ ಕೇಂದ್ರ ಸಮಾಜಕ್ಕೆ ಶಕ್ತಿ ಕೊಡುತ್ತದೆ ಎಂಬ ವಿಶ್ವಾಸ ನಮಗಿತ್ತು. ಆದರೆ ಹಣ ಹಂಚಿಕೆ, ಅಪಪ್ರಚಾರ ಇನ್ನಿತರ ವಾಮಮಾರ್ಗದ ಕಾರಣದಿಂದಾಗಿ ನಮಗೆ ಸಣ್ಣ ಅಂತರದಿಂದ ಸೋಲಾಯಿತು. ಹಿಂದೂ ಸಮಾಜ ಶಕ್ತಿಯಾಗಬೇಕು ಎಂಬುದು ತಾಯಂದಿರಲ್ಲಿ ಮಠಾಧಿಪತಿಗಳಲ್ಲಿ, ಸಂಘ ಪರಿವಾರದಲ್ಲಿ, ಬಿಜೆಪಿ ಪದಾಧಿಕಾರಿಗಳಲ್ಲಿತ್ತು. ಕೆಲ ನಾಯಕರ ತಪ್ಪು ಹೆಜ್ಜೆಗಳಿಂದಾಗಿ ಅಂತಹ ಅವಕಾಶ ತಪ್ಪಿ ಹೋಯಿತು. ಮೇಲಿನ ಸ್ಥಾನದಲ್ಲಿ ಕುಳಿತಿದ್ದ ನಾಯಕರು ಮಾಡಿದ ತಪ್ಪು ನಿರ್ಧಾರದಿಂದಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕಾದ ನಾವು ಶಕ್ತಿ ಕಳೆದುಕೊಂಡೆವು ಎಂದರು. 

ನನ್ನಲ್ಲಿ ಎಂದೂ ಜಾತಿ ಇಲ್ಲ. ಇರುವುದು ಹಿಂದುತ್ವ ಮಾತ್ರ. ಆಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ. ಆದರೂ ನನ್ನ ಬಗ್ಗೆ ಹಲವಾರು ಅಪಮಾನ, ಅಪವಾದಗಳನ್ನು ಮಾಡಿದರು. ಅವರಿಗೆ ನನ್ನ ಕಣ್ಣೀರಿನ ಹನಿ ತಟ್ಟಲಿದೆ. ಶ್ರೀ ಮಹಾಲಿಂಗೇಶ್ವರ ಉತ್ತರ ನೀಡಲಿದ್ದಾನೆ. ದೈವ ದೇವರುಗಳು ಅವರಿಗೆ ಪಶ್ಚಾತ್ತಾಪದ ಜೊತೆಗೆ ಸನ್ನಡತೆಯನ್ನು ನೀಡಲಿ ಎಂದ ಅವರು ಚುನಾವಣೆಯಲ್ಲಿ ನಾನು ಸೋತ್ತಿದ್ದರೂ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಸ್ಪರ್ಧೆಯ ಮೂಲಕ ದೇಶಕ್ಕೆ ಬದಲಾವಣೆಯ ಚಿಂತನೆ ನೀಡಿದ್ದೇನೆ ಎಂದು ಹೇಳಿದರು.  

ಪ್ರಸನ್ನ ಕುಮಾರ್ ಮಾರ್ತ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಸುರೇಶ್ ಪುತ್ತೂರಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದ್ಯಮಿ ರಾಜಶೇಖರ್ ಬನ್ನೂರು ಪುತ್ತಿಲ ಪರಿವಾರ ಸಂಘಟನೆಯ ನೂತನ ಲಾಂಚನ ಬಿಡುಗಡೆಗೊಳಿಸಿದರು. ವಸಂತ ಲಕ್ಷ್ಮೀ ಮತ್ತು ಡಾ. ಗಣೇಶ್ ಪ್ರಸಾದ್ ಮುದ್ರಜೆ ಉಪಸ್ಥಿತರಿದ್ದರು. ಉಮೇಶ್ ಕೋಡಿಬೈಲು ಸ್ವಾಗತಿಸಿದರು.  ನವೀನ್ ಪಂಜಳ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆಯಲ್ಲಿ ಚಾಲನೆ ಪಡೆದುಕೊಂಡ ಕಾಲ್ನಡಿಗೆ ಜಾಥಾ, ಮುಖ್ಯರಸ್ತೆಯಾಗಿ ಸಾಗಿ ದೇವಸ್ಥಾನದ ದೇವರಮಾರು ಗದ್ದೆಗೆ ಆಗಮಿಸಿತು. 

Similar News