ಕೆಎಎಸ್ ಅಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

Update: 2023-05-26 13:51 GMT

ಬೆಂಗಳೂರು, ಮೇ 26: ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿ ಡಾ.ಮೈತ್ರಿ ಅವರಿಗೆ ಸಹೋದರನೇ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧಿಕಾರಿ ಡಾ.ಮೈತ್ರಿ ನೀಡಿರುವ ದೂರಿನನ್ವಯ ಅವರ ಸಹೋದರ ಡಾ.ಸಂಜಯ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಜಯನಗರದಲ್ಲಿ ತಮ್ಮ ಕುಟುಂಬದೊಂದಿಗೆ ಡಾ.ಮೈತ್ರಿ ವಾಸವಿದ್ದು, ಸಹೋದರ ಡಾ.ಸಂಜಯ್ ಪ್ರತ್ಯೇಕವಾಗಿ ವಾಸವಿದ್ದರು. ಎರಡು ವರ್ಷಗಳಿಂದ ತಾನು ಹೊಸದಾಗಿ ವ್ಯಾಪಾರ ನಡೆಸಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.ಇದಕ್ಕೆ ಮೈತ್ರಿ ನಿರಾಕರಿಸಿದ್ದರಂತೆ. ಮೇ 11 ರಂದು ಮೈತ್ರಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಸದ್ಯ ಡಾ.ಮೈತ್ರಿ ನೀಡಿರುವ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಡಾ. ಸಂಜಯ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

Similar News