ಕೆಎಸ್ಸಾರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಮೃತ್ಯು: ಚಾಲಕ ವಶಕ್ಕೆ

Update: 2023-06-04 14:14 GMT

ಬೆಂಗಳೂರು, ಜೂ. 4: ಕೆಎಸ್ಸಾರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಆನಂದರಾವ್ ಸರ್ಕಲ್ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಹೆಬ್ಬಾಳದ ಕೆಂಪಾಪುರ ನಿವಾಸಿ ಲತಾ(55) ಎಂದು ಗುರುತಿಸಲಾಗಿದೆ. ಇನ್ನು ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. 

ಗೆಜೆಟೆಡ್ ಆಫೀಸರ್ ಆಗಿರುವ ಲತಾ, ರವಿವಾರದ ಹಿನ್ನೆಲೆ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಗಾಂಧಿನಗರಕ್ಕೆ ಶಾಪಿಂಗ್‍ಗೆ ಬಂದಿದ್ದರು. ಶಾಪಿಂಗ್ ಮುಗಿಸಿಕೊಂಡು ಆನಂದರಾವ್ ವೃತ್ತದಲ್ಲಿ ಮೇಲ್ಸೇತುವೆ ಬಳಿ ಹಿಂದಿರುಗುವ ವೇಳೆ ದ್ವಿಚಕ್ರ ವಾಹನಕ್ಕೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಈ ವೇಳೆ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತಿದ್ದ ಲತಾ ಬಸ್‍ನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಲತಾ ಅವರ ಪತಿಗೆ ಸಣ್ಣಪುಟ್ಟ ಗಾಯವಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಲತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನೆ ಸಂಬಂಧ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದು, ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Similar News