ಶ್ರೀನಿವಾಸ ವಿವಿ ವತಿಯಿಂದ ಸ್ಪೀಕರ್ ಯು.ಟಿ. ಖಾದರ್‌ಗೆ ಸನ್ಮಾನ

Update: 2023-06-04 16:00 GMT

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾನಿಲಯ ಮಂಗಳೂರು ವತಿಯಿಂದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್‌ಗೆ ಸನ್ಮಾನ ಕಾರ್ಯಕ್ರಮ ರವಿವಾರ  ಹೋಟೆಲ್ ಸಾಫ್ಫಾರೋನ್‌ನಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯು. ಟಿ. ಖಾದರ್ ಅವರು  ದೇಶದ ಅಭಿವೃದ್ಧಿಗೆ  ಯುವಜನರು ಗಮನ ಹರಿಸಬೇಕಾಗಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಹಾಗೂ ಶಿಕ್ಷಣ ಸಂಸ್ಥೆಗೆ ನೆರವು ನೀಡುವುದಾಗಿ ತಿಳಿಸಿದರು. ಅಂತೆಯೇ ನಗರದಲ್ಲಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಶ್ವತ  ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿ ಶ್ರೀನಿವಾಸ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ, ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ನಾವು, ನಿಮ್ಮ ಜತೆಯಾಗುತ್ತೇವೆ. ವನಮಹೋತ್ಸವ ಹತ್ತಿರ ಬರುತ್ತಿದ್ದು, ದೊಡ್ಡಸಂಖ್ಯೆಯಲ್ಲಿ ಸಸಿ ನೆಡುವ ಉದ್ದೇಶವಿದೆ ಇದರಿಂದ ಮುಂದೆ ಮಳೆಯ ಸಮಸ್ಯೆ ಕಡಿಮೆಯಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವ ವಿದ್ಯಾಲಯದ ಕುಲಾಧಿಪತಿ ಗೌರವಾನ್ವಿತ ಡಾ. ಸಿಎ ಎ. ರಾಘವೇಂದ್ರ ರಾವ್ ಮಾತನಾಡಿ, ಸ್ಪೀಕರ್ ಆಗಿ ಆಯ್ಕೆಯಾದ ಯು. ಟಿ. ಖಾದರ್ ಅವರನ್ನು ಅಭಿನಂದಿಸಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ  ಸದಸ್ಯೆ ಎ.ವಿಜಯಲಕ್ಷ್ಮೀ  ಆರ್. ರಾವ್, ಪ್ರೊ. ಇಆರ್. ಎ.ಮಿತ್ರಾ ಎಸ್.ರಾವ್, ಅಭಿವೃದ್ಧಿ ಕುಲಸಚಿವ ಡಾ.ಅಜಯ್ ಕುಮಾರ್, ಶ್ರೀನಿವಾಸ ಸಮೂಹ ಸಂಸ್ಥೆಗಳ ಡೀನ್ ಮತ್ತು ಪ್ರಾಂಶುಪಾಲರು ಉಪಸ್ಥಿತರಿದ್ದರು.

ಶ್ರೀನಿವಾಸ ವಿವಿ ಉಪ ಕುಲಪತಿ ಡಾ. ಪಿ. ಎಸ್. ಐತಾಳ್ ಸ್ವಾಗತಿಸಿದರು, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್‌ಕುಮಾರ್ ವಂದಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Similar News