ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌: ಕುಮಾರಸ್ವಾಮಿ ಆಕ್ರೋಶ

''ವಿರೋಧ ಪಕ್ಷ ಇರುವುದು ಯುದ್ಧಕ್ಕಾಗಿ, ಸ್ನೇಹ ಮಾಡೋಕೆ ಅಲ್ಲ''

Update: 2023-06-06 13:45 GMT

ಬೆಂಗಳೂರು, ಜೂ.6: ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಇಂದು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮಕ್ಷಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಬಳಕೆ ಬಗ್ಗೆ ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದು, ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಹಾಗೆ ವೇದಿಕೆ ಸಿದ್ಧ ಮಾಡಿಕೊಟ್ಟಿರುವುದೇ ಕಾಂಗ್ರೆಸ್ ಸರಕಾರ. ಮುಖ್ಯಮಂತ್ರಿಗಳಿಂದ ಇಂತಹ ಹೇಳಿಕೆ ಶೋಭೆಯಲ್ಲ ಎಂದರು.

ರಾಜ್ಯದ ಜನರಿಗೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಡಲಾಗಿದೆ. ಇದರಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಸುಳ್ಳು ಹೇಳಿ ಮತ ಪಡೆದಿರುವುದು ಸಾಬೀತಾಗಿದೆ. ಗ್ಯಾರಂಟಿಗಳ ಸಾಧಕ ಭಾದಕಗಳ ಬಗ್ಗೆ ಆಗ ಚರ್ಚಿಸದೆ, ಎಲ್ಲವೂ ಉಚಿತ ಎನ್ನುವ ಸುಳ್ಳನ್ನು ಜನರಿಗೆ ಬಿತ್ತಿ. ಈಗ ವಿಪರೀತ ಷರತ್ತು ವಿಧಿಸುತ್ತಿರುವುದು ಸರಿಯಲ್ಲ.  ಮೊದಲೇ ಈ ಬಗ್ಗೆ ಯೋಚನೆ ಪರಿಜ್ಞಾನ ಇರಲಿಲ್ಲವೇ, ಕಾಂಗ್ರೆಸ್‍ನವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯೇ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಈಗಿನ ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು. ಈಗಾಗಲೇ 13 ಬಜೆಟ್‍ಗಳನ್ನು ಮಂಡಿಸಿದ್ದಾರೆ. ಇನ್ನೇನು 14ನೇ ಬಜೆಟ್ ಅನ್ನೂ ಮಂಡಿಸಲಿದ್ದಾರೆ. ರಾಜ್ಯದ ಹಣಕಾಸು ಬಗ್ಗೆ, ಆರ್ಥಿಕತೆ ಬಗ್ಗೆ ಅವರಿಂತ ಬಲ್ಲ ಜ್ಞಾನಿಗಳು ಯಾರಿದ್ದಾರೆ, ಮುಂದೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು. ಅದು ಬಿಟ್ಟು ಜನರನ್ನು ಪ್ರತಿಪಕ್ಷಗಳು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಾನು ಪ್ರತಿಪಕ್ಷದಲ್ಲಿ ಕೂತಿರುವುದು ಸರಕಾರ ಮಾಡುವ ಪ್ರತಿ ಜನವಿರೋಧಿ ಕೆಲಸಗಳಿಗೆ ಕೈ ಎತ್ತುವುದಕ್ಕಲ್ಲ. ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ಸಮರ ಸಾರುವುದಕ್ಕೆ. ನಮ್ಮದು ನುಡಿದಂತೆ ನಡೆಯುವ ಸರಕಾರ ಎಂದರು, ನುಡಿದಂತೆ ಎಲ್ಲಿ ನಡೆಯುತ್ತಿದೆ, ಈಗ ಉಚಿತ ವಿದ್ಯುತ್ ಅನ್ನು ಬಾಡಿಗೆದಾರರಿಗೆ ಕೊಡುವುದಿಲ್ಲ ಎನ್ನುತ್ತಿದೆ. ಹಾಗಾದರೆ ಅವರ ಪಾಡೇನು ಎಂದರು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವರು ಸ್ನೇಹಕ್ಕೂ ಸಿದ್ದ, ಯುದ್ದಕ್ಕೂ ಸಿದ್ದ ಎಂದಿದ್ದಾರೆ. ನಾವು ಇಲ್ಲಿರುವುದು ಸ್ನೇಹ ಮಾಡುವುದಕ್ಕಲ್ಲ. ಜನರಿಗೆ ಕಷ್ಟ ಬಂದರೆ ಯುದ್ಧ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಸೋಮವಾರ ಧರಣಿ ಮಾಡಿದ್ದಾರೆ. ಇವರು ಯಾವ ಕಾರಣಕ್ಕಾಗಿ ಧರಣಿ ಪ್ರತಿಭಟನೆ ಮಾಡಿದ್ದಾರೆ ಎನ್ನುವುದೇ ಸೋಜಿಗ. ಬಿಜೆಪಿ ಸರಕಾರದ ಕಾಲದಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ದಾರಿಯಾಗಿದ್ದು, ಆದರೆ, ಈಗ ನೋಡಿದರೆ ಪ್ರತಿಭಟನೆ ಹೆಸರಿನಲ್ಲಿ ಕಣ್ಣೊರೆಸುವ ನಾಟಕವಾಡುತ್ತಿದ್ದಾರೆ. ಜನರು ಎರಡೂ ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಈ ಸರಕಾರಕ್ಕೆ ನಮ್ಮ ಬೆಂಬಲ, ವಿರೋಧ ವಿಷಯಾಧಾರಿತವಾಗಿರುತ್ತದೆ. ಎಲ್ಲ ನೀರಾವರಿ ಯೋಜನೆಗಳನ್ನು ಈಡೇರಿಸಬೇಕು. ನೀರಾವರಿಗೆ ಸಂಬಂಧಿಸಿದಂತೆ ಮೇಕೆದಾಟು, ಮಹಾದಾಯಿ ಯೋಜನೆಗಳನ್ನು ಸಂಪೂರ್ಣ ಮಾಡುತ್ತೇವೆ ಎಂದಿರುವ ಈ ಸರಕಾರ ಮುಂದಿನ ಐದು ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡುತ್ತೆದೆಯೋ ಕಾದು ನೋಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಪಕ್ಷದ ಹಿರಿಯ ನಾಯಕ, ಶಾಸಕ ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿಎಂ ಫಾರೂಕ್, ಟಿ.ಎ.ಶರವಣ, ಇಂಚರ ನಾರಾಯಣಸ್ವಾಮಿ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಶಾಸಕರಾದ ಮೇಲೂರು ರವಿ, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ ಮೂರ್ತಿ, ಹಿರಿಯ ಮುಖಂಡರಾದ ಜವರಾಯ ಗೌಡ, ಸಿಎಂಆರ್ ಶ್ರೀನಾಥ್, ಮುನೇಗೌಡ, ಬಂಗಾರಪೇಟೆ ಮಲ್ಲೇಶ್ ಮುಂತಾದವರು ಹಾಜರಿದ್ದರು.

Similar News