ಆಸ್ಪತ್ರೆ ಸಿಬ್ಬಂದಿಗಳು ಮಾನವೀಯತೆಯೊಂದಿಗೆ ಕರ್ತವ್ಯ ನಿರ್ವಹಿಸಿ: ಶಾಸಕ ಅಶೋಕ್ ರೈ

​ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 6 ಡಯಾಲಿಸಿಸ್ ಯಂತ್ರ, ಆರ್.ಒ ಪ್ಲಾಂಟ್ ಲೋಕಾರ್ಪಣೆ

Update: 2023-06-09 12:25 GMT

ಪುತ್ತೂರು: ಸರ್ಕಾರಿ ಆಸ್ಪತ್ರೆಗೆ ಆಗಮಿಸುವವರು ಬಡವರು ಅವರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿಗೆ ಬರುತ್ತಾರೆ. ಬಡವರ ಸೇವೆಯು ದೇವರ ಸೇವೆ ಎಂದು ಪರಿಗಣಿಸಿ ಆಸ್ಪತ್ರೆಯ ಸಿಬ್ಬಂದಿಗಳು ಮಾನವೀಯತೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. 

ಅವರು ರೋಟರಿ ಕ್ಲಬ್ ಸಂಸ್ಥೆಗಳಿಂದ ಡಯಾಲಿಸಿಸ್ ಮೆಷಿನ್ ನೀಡುವ ಮೂಲಕ ಒಳ್ಳೆಯ ಯೋಜನೆಯೊಂದು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸ ನಡೆದಿದೆ ಎಂದು ಹೇಳಿದರು.

ಶುಕ್ರವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರೋಟರಿ ಜಿಲ್ಲೆ 3181ರ ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್, ಅಮೆರಿಕಾ ಫ್ಲೋರಿಡಾ ರೋಟರಿ ಜಿಲ್ಲೆ 5890 ರೋಟರಿ ಕ್ಲಬ್ ನ್ಯೂ ಟಾಂಪಾ ನೂನ್ ವತಿಯಿಂದ ರೂ.52.50 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿರುವ 6 ಡಯಾಲಿಸಿಸ್ ಯಂತ್ರ ಹಾಗೂ ಆರ್.ಒ ಪ್ಲಾಂಟ್ ಲೋಕಾರ್ಪಣೆಗಳಿಸಿ ಮಾತನಾಡಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರಮುಖ ಬೇಡಿಕೆ ಅನಸ್ತೇಶಿಯನ್, ಗೈನಕೋಲಜಿಸ್ಟ್ ಹಾಗೂ ಟೆಕ್ನಿಷಿಯನ್ ಅವಶ್ಯಕತೆಯಿದ್ದು ಇದನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಒಟ್ಟು 220 ಡಯಾಲಿಸಿಸ್ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳಲ್ಲಿಯೂ ಡಯಾಲಿಸಿಸಿ ಯಂತ್ರಗಳಿವೆ. ಸರ್ಕಾರವು ಬಡವರಿಗೆ ಉಚಿತವಾಗಿ ಡಯಾಲಿಸಿಸಿ ನಡೆಸುವ ಯೋಜನೆ ರೂಪಿಸಿದ್ದು, ಎಲ್ಲಾ ಕೇಂದ್ರಗಳಲ್ಲಿಯೂ ಉಚಿತವಾಗಿ ಡಯಾಲಿಸಿಸ್ ನಡೆಸಲಾಗುತ್ತಿದೆ. ಕಡಬದಲ್ಲಿಯೂ 70 ಕಿಡ್ನಿ ವೈಫಲ್ಯದ ರೋಗಿಗಳು ವೈಟಿಂಗ್‍ನಲ್ಲಿದ್ದಾರೆ. ಮುಂದಿನ 20 ದಿನಗಳ ಒಳಗಾಗಿ ಕಡಬದಲ್ಲಿ 3 ಡಯಾಸಿಸ್ ಯಂತ್ರಗಳು ಕಾರ್ಯಾರಂಭಗೊಳ್ಳಲಿದೆ. ಅಲ್ಲದೆ ಪುತ್ತೂರಿನ ವೈದಾಧಿಕಾರಿಗಳ ಕೇಳಿಕೆಯಂತೆ ಪುತ್ತೂರಿಗೆ ಹೆಚ್ಚುವರಿಯಾಗಿ ಇನ್ನು 2 ಡಯಾಲಿಸಿಸ್ ಯಂತ್ರವನ್ನು ಸರ್ಕಾರದ ವತಿಯಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಈಗಾಗಲೇ ಆಯುಷ್ಮಾನ್ ಹಾಗೂ ಯಶಸ್ವಿನಿ ಯೋಜನೆಯಲ್ಲಿ ಸರ್ಕಾರದಿಂದ ಹಣ ಪಾವತಿಯಾಗುತ್ತಿಲ್ಲ ಎಂಬ ಕಾರಣದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ಹೊರತು ಪಡಿಸಿ ಇತರ ಎಲ್ಲಾ ಖಾಸಗಿ ಆಸ್ಪತ್ರೆಗಳು ಯೋಜನೆಯಿಂದ ಹೊರ ಬಂದಿದ್ದು, ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗದಂತಾಗಿದೆ. ಈ ಹಿಂದೆ ಯೋಜನೆಯಡಿ ಸೇವೆ ನೀಡುತ್ತಿದ್ದ ಎಲ್ಲಾ ಆಸ್ಪತ್ರೆಗಳಲ್ಲಿ ಪುನಃ ಯೋಜನೆ ಅಳವಡಿಸಿಕೊಳ್ಳುವಂತೆ ಕಡ್ಡಾಯಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಲಿದ್ದೇನೆ ಎಂದರು.

ರೋಟರಿ ಜಿಲ್ಲೆ 3181 ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಮಾಜಿ ಶಾಸಕ ಸಂಜೀವ ಮಠಂದೂರು ಶುಭ ಹಾರೈಸಿದರು. ರೋಟರಿ ಅಧ್ಯಕ್ಷ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. 

ರೋಟರಿ ಸಂಸ್ಥೆಯ ಪ್ರಮುಖರಾದ ಕೆ.ಕೃಷ್ಣ ಶೆಟ್ಟಿ, .ಡಾ.ಸೂರ್ಯನಾರಾಯಣ ಕೆ. ಆರ್.ಕೇಶವ, ವಿಕ್ರಮದತ್ತ, ಪಿ.ಕೆ.ರಾಮಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆಶಾಜ್ಯೋತಿ ಕೆ., ಜಿಲ್ಲಾ ರೋಟರಿ ಕಾರ್ಯದರ್ಶಿಗಳಾದ ನಾರಾಯಣ ಹೆಗ್ಡೆ, ಕೆ.ವಿಶ್ವಾಸ್ ಶೆಣೈ, ರಾಜೇಂದ್ರ ಕಲ್ಬಾವಿ, ಅಸಿಸ್ಟೆಂಟ್ ಗವರ್ನರ್ ಎ.ಜೆ.ರೈ, ಶಿವರಾಮ ಏನೆಕಲ್, ನಗರಸಭೆ ಸದಸ್ಯೆ ಯಶೋದಾ ಹರೀಶ್, ವಲಯ ಸೇನಾನಿ ಹರ್ಷಕುಮಾರ್ ರೈ, ಸೆನೋರಿಟಾ ಆನಂದ್, ಡಯಾಲಿಸಿಸ್ ಸೆಂಟರ್ ಯೋಜನಾ ಸಂಯೋಜಕ ಆಸ್ಕರ್ ಆನಂದ್, ಪಶುಪತಿ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಕೆ. ಆಚಾರ್ ಸ್ವಾಗತಿಸಿದರು. ರತ್ನಾಕರ ರೈ ಪ್ರಸ್ತಾವನೆಗೈದರು. ಸಿಲ್ವಿಯ ಡಿ ಸೋಜ ವಂದಿಸಿದರು. ಅನಿಲ ದೀಪಕ್ ಶೆಟ್ಟಿ, ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.

Similar News