‘ರಾಷ್ಟ್ರೀಯ ಕ್ವಾಂಟಂ ಮಿಷನ್’ | ರಾಜ್ಯಗಳ ಪಾತ್ರಕ್ಕೆ ಒತ್ತಾಯಿಸಿದ ಸಂಸದ ಕುಮಾರ ನಾಯಕ್: ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ
ಬೆಂಗಳೂರು, ಆ. 31: ಕೇಂದ್ರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಕ್ವಾಂಟಂ ಮಿಷನ್ನಲ್ಲಿ ರಾಜ್ಯಗಳ ಪಾತ್ರ ಮಹತ್ವವಾಗಿದ್ದು, ದೇಶದ ಭವಿಷ್ಯದ ಆರ್ಥಿಕತೆ ಮತ್ತು ಭದ್ರತೆಯನ್ನು ರೂಪಿಸುವ ಕ್ವಾಂಟಂ ತಂತ್ರಜ್ಞಾನ ಅಭಿವೃದ್ದಿಯಲ್ಲಿ ರಾಜ್ಯಗಳ ಪಾತ್ರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸಂಸದ ಕುಮಾರ ನಾಯಕ್ ಆಗ್ರಹಕ್ಕೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
2025ರ ಆ.11ರಂದು ಲೋಕಸಭೆಯಲ್ಲಿ ನಿಯಮ 377 ಅಡಿಯಲ್ಲಿ ಅಡಿಯಲ್ಲಿ ಈ ವಿಷಯವನ್ನು ಸಂಸದರು ಪ್ರಸ್ತಾಪಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಕೇಂದ್ರ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್, ಮಿಷನ್ ವಿನ್ಯಾಸದಲ್ಲೇ ರಾಜ್ಯಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಐಎಸ್ಸಿ ಬೆಂಗಳೂರು, ಐಐಟಿ ಮದ್ರಾಸ್, ಐಐಟಿ ಮುಂಬೈ ಮತ್ತು ಐಐಟಿ ದಿಲ್ಲಿ-ಈ ನಾಲ್ಕು ಥೀಮಾಟಿಕ್ ಹಬ್ಗಳ ಹಬ್ ಗವರ್ನಿಂಗ್ ಬೋರ್ಡ್ಗಳಲ್ಲಿ ಸಂಬಂಧಿತ ರಾಜ್ಯದ ಹಿರಿಯ ಅಧಿಕಾರಿಯೊಬ್ಬರನ್ನು ಸದಸ್ಯರಾಗಿ ಸೇರಿಸಲಾಗುತ್ತದೆ.
ಬೆಂಗಳೂರು ಐಐಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವಾಂಟಂ ಕಂಪ್ಯೂಟಿಂಗ್ ಹಬ್ಗೆ ರಾಜ್ಯ ಸರಕಾರದಿಂದ ಹಿರಿಯ ಅಧಿಕಾರಿಯೊಬ್ಬರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರ ಈ ಭರವಸೆಯನ್ನು ಸಂಸದ ಕುಮಾರ ನಾಯಕ್ ಸ್ವಾಗತಿಸಿದ್ದು, ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ವಿಶೇಷ ಮೌಲ್ಯ ತುಂಬಲಿದೆ. ಕೇಂದ್ರದ ಈ ಸ್ಪಷ್ಟನೆ, ರಾಜ್ಯ-ಕೇಂದ್ರ ಸಹಕಾರವನ್ನು ಬಲಪಡಿಸುವುದಷ್ಟೇ ಅಲ್ಲದೇ, ಭಾರತದ ಮುಂದಿನ ವೈಜ್ಞಾನಿಕ ಕ್ರಾಂತಿಯ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.