ಬೆಂಗಳೂರು | ಸಿಸಿಬಿ ಪೊಲೀಸರೆಂದು ಹೇಳಿಕೊಂಡು ಬಾಂಗ್ಲಾ ಪ್ರಜೆಗಳಿಂದ ಹಣ ವಸೂಲಿ ಪ್ರಕರಣ: ಕಾನ್ಸ್ಟೇಬಲ್ ಸಹಿತ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು, ಸೆ.10: ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು ಬಾಂಗ್ಲಾ ಪ್ರಜೆಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಓರ್ವ ಕಾನ್ಸ್ಟೇಬಲ್ ಸಹಿತ ಇಬ್ಬರನ್ನು ನಗರದಲ್ಲಿ ಬಂಧಿಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಜನ ಸದ್ಭಾವನಾ ಸಂಘಟನೆಯ ಸದಸ್ಯರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು, ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ಕಾನ್ಸ್ಟೇಬಲ್ ಪ್ರಶಾಂತ್ ನಾವಿ ಹಾಗೂ ಮತ್ತೋರ್ವ ಖಾಸಗಿ ವ್ಯಕ್ತಿ ನಾಸೀರ್ ಖಾನ್ ಎಂಬುವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ನಾವಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ನಾಸೀರ್ ಖಾನ್ ಜೊತೆ ಪ್ರಶಾಂತ್ ನಾವಿ ಕೈಜೋಡಿಸಿದ್ದ.
ಕಸ ಸಂಗ್ರಹಣೆ ಮಾಡುವ ಬಾಂಗ್ಲಾ ಪ್ರಜೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಅವರನ್ನು ಬಂಧಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಕೆಲವರನ್ನು ಬಂಧನದ ನೆಪದಲ್ಲಿ ಕರೆದೊಯ್ದು, ಹಣ ವಸೂಲಿ ಮಾಡಿರುವುದು ಸಹ ತನಿಖೆ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.