ರೈತರ ಸಮಸ್ಯೆ ಬಗ್ಗೆ ಕಾಳಜಿ ಇರುವವರು ಇಲ್ಲದೇ ಇರುವುದರಿಂದಲೇ ಪಿಟಿಸಿಎಲ್ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ : ನ್ಯಾ.ವಿ.ಗೋಪಾಲಗೌಡ
ಬೆಂಗಳೂರು : ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಅಸಂವಿಧಾನಿಕ, ಅಸಂಬದ್ಧ ತೀರ್ಪುಗಳನ್ನು ನ್ಯಾಯಮೂರ್ತಿಗಳು ನೀಡಿದರೆ ಜನರು ಸಹಿಸುವುದಿಲ್ಲ, ಪ್ರಶ್ನೆ ಮಾಡಲಿದ್ದಾರೆ. ಜನ ಪ್ರವಾಹದಂತೆ ಹರಿದು ಬರಲಿದ್ದಾರೆ. ಆಗ ಇಂತಹ ತೀರ್ಪುಗಳು ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಎಚ್ಚರಿಸಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್, ಪರ್ಯಾಯ ಕಾನೂನು ವೇದಿಕೆ, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಮತ್ತು ಸ್ವತಂತ್ರ ಪ್ರಗತಿಪರ ಸಂಶೋಧಕರು ವತಿಯಿಂದ ಹಮ್ಮಿಕೊಂಡಿದ್ದ ‘ಪಿಟಿಸಿಎಲ್ ಕಾಯ್ದೆ-1978ರ ಅನುಷ್ಠಾನದಲ್ಲಿನ ಸಮಸ್ಯೆಗಳು’ ಕುರಿತ ರಾಜ್ಯ ಮಟ್ಟದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಿಟಿಸಿಎಲ್ ಕಾಯ್ದೆಯಡಿ ವಿಳಂಬವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅರ್ಜಿ ತಿರಸ್ಕರಿಸಿದ್ದಾರೆ. ಕಾಲಮಿತಿಯನ್ನು ಯಾವ ಆಧಾರದಲ್ಲಿ ವಿಧಿಸಿದ್ದೀರಿ? ಕಾಯ್ದೆಯ ಸೆಕ್ಷನ್ 5ಕ್ಕೆ ಕಾಲಮಿತಿ ಹೇಗೆ ಸೇರಿಸಿದ್ದೀರಿ? ಕಾನೂನಿನಲ್ಲಿ ಇಲ್ಲದೇ ಇರುವುದನ್ನು ಸೇರಿಸುವ ಅಧಿಕಾರವನ್ನು ನಿಮಗೆ ಕೊಟ್ಟವರು ಯಾರು? ಸಂವಿಧಾನದ ಆಶಯಕ್ಕೆ, ರಾಜ್ಯ ನೀತಿಯ ನಿರ್ದೇಶನ ತತ್ವಗಳಿಗೆ ವಿರುದ್ಧವಾಗಿ ತೀರ್ಪು ನೀಡುವವರು ನ್ಯಾಯಾಧೀಶರು ಹೇಗಾಗುತ್ತಾರೆ? ಎಂದು ಗೋಪಾಲಗೌಡ ಪ್ರಶ್ನಿಸಿದರು.
ಕಾಲಮಿತಿಯ ಕಾರಣ ನೀಡಿ ಅರ್ಜಿ ತಿರಸ್ಕರಿಸಿರುವುದು ಮಂಚೇಗೌಡ ಮತ್ತು ಇತರರು ಹಾಗೂ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿದ ತೀರ್ಪಿನ ಉಲ್ಲಂಘನೆಯಾಗಿದೆ. ಕಾನೂನು ತಿಳಿದುಕೊಳ್ಳಬೇಕು, ಇಲ್ಲದೇ ಇದ್ದರೆ ನಾವೇ ಕಾನೂನು ತಿಳಿಸುವ ಕೆಲಸ ಮಾಡುತ್ತೇವೆ. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಬಡವರ ಬಗ್ಗೆ, ಎಸ್ಸಿ, ಎಸ್ಟಿ, ಹಿಂದುಳಿದವರು, ಮಹಿಳೆಯರು, ರೈತರ ಸಮಸ್ಯೆ ಬಗ್ಗೆ ಕಾಳಜಿ ಇರುವವರು ಇಲ್ಲದೇ ಇರುವುದರಿಂದಲೇ ಪಿಟಿಸಿಎಲ್ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಅನುಷ್ಠಾನ ಮಾಡದ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಮಾತನಾಡಿ, ಸಾವಿರಾರು ವರ್ಷಗಳಿಂದ ಸಾಮಾಜಿಕ ಅನ್ಯಾಯ ಮಾಡುತ್ತಾ ಬರಲಾಗಿದೆ. ಇದು ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ವೈದಿಕಶಾಹಿ ಮನಸ್ಥಿತಿ ಅಧಿಕಾರಗಳು ಆ ಸ್ಥಾನದಲ್ಲಿ ಇರುವುದರಿಂದ ಅವರ ಮನಸ್ಸುಗಳನ್ನು ಬದಲಾಯಿಸಲು ಆಗುತ್ತಿಲ್ಲ. ಈ ಅನ್ಯಾಯದ ವಿರುದ್ಧ ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿ ಚಳವಳಿ ಕಟ್ಟಬೇಕು ಎಂದು ಕರೆ ನೀಡಿದರು.
ಪಿಟಿಸಿಎಲ್ ಕಾಯ್ದೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಮತ್ತು ಅನುಷ್ಠಾ ನದಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಿಸಲು ಸರಕಾರಕ್ಕೆ ಶಿಫಾರಸುಗಳನ್ನು ಮಾಡಲಾಗುವುದು. ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಿಳಿಸಲಾಗುವುದು ಎಂದು ತೀರ್ಪುಗಾರರ ಮಂಡಳಿ ಸದಸ್ಯರು ತಿಳಿಸಿದರು.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮತ್ತು ದಾವಣಗೆರೆ ಜಿಲ್ಲೆಗಳಿಂದ ಬಂದ ಸಂತ್ರಸ್ತರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಕಾಯ್ದೆಯಲ್ಲಿರುವ ಕಾನೂನು ತೊಡಕುಗಳ ಬಗ್ಗೆ ವಕೀಲ ಕ್ಲಿಫ್ಟನ್ ಡಿ.ರೊಜಾರಿಯೊ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಿ.ತಂಗರಾಜ್, ಭೂಶಕ್ತಿ ಕೇಂದ್ರ ಅಧ್ಯಕ್ಷೆ ಜ್ಯೋತಿ ರಾಜ್, ಪಿಟಿಸಿಎಲ್ ಕಾನೂನು ತಜ್ಞ ಎಚ್.ಎಲ್.ವೆಂಕಟೇಶ್, ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್, ವಕೀಲರಾದ ವಿನಯ್ ಶ್ರೀನಿವಾಸ್, ಸೃಜನಾ, ಸಂಶೋಧಕ ಶಶಾಂಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.