ಅಪಘಾತದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಸ್ಥರಿಗೆ ಪರಿಹಾರ ವಿತರಣೆ

Update: 2026-08-15 19:46 IST

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ಸಾರಿಗೆ ಸಂಸ್ಥೆಯಲ್ಲಿ ಸೇವೆಯಲ್ಲಿರುವ ವೇಳೆ ರಸ್ತೆ ಅಪಘಾತ ಹಾಗೂ ಸಹಜ ಮರಣ ಹೊಂದಿದ 65 ಮಂದಿ ಸಿಬ್ಬಂದಿ ಅವಲಂಭಿತರಿಗೆ ಗುಂಪು ವಿಮಾ ಯೋಜನೆ ಹಾಗೂ ಕಾರ್ಪೊರೇ ಟ್ ಸ್ಯಾಲರಿ ಪ್ಯಾಕೇಜ್ ಪರಿಹಾರದ ಚೆಕ್‍ನ್ನು ಸಾರಿಗೆ ಸಚಿವ ಬೈರತಿ ಸುರೇಶ್ ವಿತರಿಸಿದರು.

ಶನಿವಾರ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪರಿಹಾರ ಚೆಕ್ ವಿತರಣೆ ಮಾಡಿದರು. 1 ಕೋಟಿ ರೂ.ವೈಯಕ್ತಿಕ ಅಪಘಾತ ವಿಮಾ ಯೋಜನೆಯಡಿಯಲ್ಲಿ ಇದುವರೆಗೂ 34 ಪ್ರಕರಣಗಳಲ್ಲಿ ಕುಟುಂಬದವರಿಗೆ ತಲಾ 1ಕೋಟಿ ರೂ.ನಂತೆ ಒಟ್ಟು 34ಕೋಟಿ ರೂ.ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ. ಕರ್ತವ್ಯನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೊಂಡ 1 ಪ್ರಕರಣದಲ್ಲಿ 25ಲಕ್ಷ ರೂ.ಪರಿಹಾರ ವಿತರಿಸಲಾಗಿದೆ.

ಆರು ಪ್ರಕರಣಗಳಲ್ಲಿ ಮೃತರ ಅವಲಂಬಿತರಿಗೆ ತಲಾ 1 ಕೋಟಿ ರೂ.ನಂತೆ ಒಟ್ಟ 6 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಯಿತು. ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ 37 ಪ್ರಕರಣಗಳಲ್ಲಿ ಮೃತರ ಅವಲಂಬಿತರಿಗೆ 14ಲಕ್ಷ ರೂ.ನಂತೆ ಒಟ್ಟು 5.18ಕೋಟಿ ರೂ. ವಿತರಿಸಲಾಯಿತು. ಅಲ್ಲದೆ, 5 ಪ್ರಕರಣಗಳಲ್ಲಿ ಮೃತರ ಅವಲಂಬಿತರಿಗೆ 10ಲಕ್ಷ ರೂ.ನಂತೆ ಒಟ್ಟು 50ಲಕ್ಷ ರೂ. ವಿತರಿಸಲಾಯಿತು.

ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟ 17 ಬಿಎಂಟಿಸಿ ನೌಕರರ ನಾಮ ನಿರ್ದೇಶಿತರಿಗೆ ತಲಾ 12 ಲಕ್ಷ ರೂ.ದಂತೆ ಒಟ್ಟು 2.40 ಕೋಟಿ ರೂ. ಗುಂಪು ವಿಮಾ ಪರಿಹಾರ ಮೊತ್ತದ ಚೆಕ್‍ಗಳನ್ನು ವಿತರಿಸಲಾಯಿತು. ಈ ವೇಳೆ ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಉಪಾಧ್ಯಕ್ಷ ನಿಕೇತ್‍ರಾಜ್ ಎಂ., ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ., ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ಭದ್ರತಾ ಮತ್ತು ಜಾಗೃತಿ ನಿರ್ದಶಕ ಅಬ್ದುಲ್ ಅಹದ್, ಗಾಯಿತ್ರಿ ಕೆ.ಎಂ.ಮತ್ತಿತರರು ಹಾಜರಿದ್ದರು.

 

‘ಮೃತಪಟ್ಟ ಸಿಬ್ಬಂದಿಯನ್ನು ಮರಳಿ ತರಲು ಸಾಧ್ಯವಿಲ್ಲ. ಕುಟುಂಬದವರು ಹಣವನ್ನು ಬ್ಯಾಂಕ್‍ನಲ್ಲಿ ಸ್ಥಿರ ಠೇವಣಿ ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಬಳಸಿಕೊಳ್ಳಬೇಕು. ಅನುಕಂಪದ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು’

-ಬೈರತಿ ಸುರೇಶ್, ಸಾರಿಗೆ ಸಚಿವ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News