ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ, ದೊರೆಸ್ವಾಮಿ ಹೋರಾಟ ಮುಂದುವರೆಸಿದ್ದೇವೆ : ನೂರ್ ಶ್ರೀಧರ್
ʼಗೌರಿ ಲಂಕೇಶ್ಗೆ ಗೌರವ ನಮನʼ
ಬೆಂಗಳೂರು : ಹಿರಿಯ ಹೋರಾಟಗಾರರಾಗಿದ್ದ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್ ಅವರನ್ನು ಮರೆಯಲು ಸಾಧ್ಯವಿಲ್ಲ. ಈ ಮೂರು ಜನರು ಹೋರಾಟಗಾರರಿಗೆ ದೊಡ್ಡ ಶಕ್ತಿಯಾಗಿದ್ದರು. ನಾವು ನಿಮ್ಮ ದಾರಿಯನ್ನು ಬಿಟ್ಟಿಲ್ಲ, ನಿಮ್ಮ ಹೋರಾಟವನ್ನು ಮುಂದುವರೆಸಿದ್ದೇವೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಹೇಳಿದ್ದಾರೆ.
ಶನಿವಾರ ಪತ್ರಕರ್ತೆ ಗೌರಿ ಲಂಕೇಶ್ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಗೌರಿ ಅವರ ಒಡನಾಡಿಗಳಿಂದ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ಹಮ್ಮಿಕೊಂಡಿದ್ದ ‘ಗೌರಿ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೌರಿ ಹತ್ಯೆಯ ನಂತರ ದೇಶಾದ್ಯಂತ ದೊಡ್ಡ ಧ್ವನಿ ಎದ್ದಿದೆ. ಕರ್ನಾಟಕದಲ್ಲಿ ‘ನಾನು ಗೌರಿ ನಾವೆಲ್ಲ ಗೌರಿ’ ಎನ್ನುವ ಘೋಷಣೆ ಸ್ವಾಭಾವಿಕವಾಗಿ ಹೊರಗೆ ಬಂತು. ಅದು ಕೇವಲ ಘೋಷಣೆಯಾಗಿರದೇ, ನಮ್ಮೆಲ್ಲರ ಎದೆಯಾಳದ ಮಾತಾಗಿದೆ ಎಂದು ಅವರು ನುಡಿದರು.
ಒಂಬತ್ತು ವರ್ಷಗಳಲ್ಲಿ ನಾವೆಲ್ಲರೂ ಖಂಡಿತವಾಗಿಯೂ ಗೌರಿ ಇದ್ದಿದ್ದರೆ, ಹೆಮ್ಮೆ ಪಡುವಂತ ಪಯಣವನ್ನೇ ಸಾಗಿದ್ದೇವೆ. ಭಯಬೀಬಿತ್ಸ ವರ್ಷಗಳಲ್ಲಿ ಸಾಗಿದ್ದೇವೆ. ಗೌರಿಯನ್ನು ಕೊಂದಾಗ ಉತ್ತುಂಗದ ಪರಿಸ್ಥಿತಿ ಇತ್ತು. ಕೋಮುವಾದಿಗಳು ಇಡೀ ದೇಶವನ್ನು ಹೆದರಿಸಿ ಯಾರನ್ನು ಬಿಡುವುದಿಲ್ಲ, ಯಾರು ಬಂದರೂ ಕೊಂದು ಹಾಕುತ್ತೇವೆ ಎನ್ನುವ ವಾತಾವರಣವನ್ನು ಸೃಷ್ಟಿಸಿದ್ದರು. ಗೌರಿ ಸಾವಿನ ನಂತರದಲ್ಲಿ ಎದ್ದ ಪ್ರತಿಧ್ವನಿ ಕೋಮುವಾದಿಗಳು ಯಾರನ್ನಾದರೂ ಮುಟ್ಟಬೇಕಾದರೆ ಸಾವಿರಸರಿ ಯೋಚಿಸಬೇಕಾದ ವಾತಾವರಣ ಸೃಷ್ಟಿಯಾಗಿದೆ ಎಂದು ನೂರ್ ಶ್ರೀಧರ್ ಹೇಳಿದರು.
ಗೌರಿ ನಂತರದಲ್ಲಿ ಸಾಕಷ್ಟು ಹೋರಾಟಗಾರರನ್ನು ಜೈಲಿಗೆ ಹಾಕಿದ್ದಾರೆ. ಆದರೆ, ಯಾವ ಬಂಧನಗಳು ಕೂಡ ಯಾರನ್ನೂ ಹೆದರಿಸಿಲ್ಲ. ಯಾರು ಈ ಬಂಧನಗಳಿಗೆ ಹೆದರಿಕೊಂಡು ಮನೆಯಲ್ಲಿ ಕೂತಿಲ್ಲ. ಮಾಧ್ಯಮಗಳ ವಿಚಾರದಲ್ಲಿಯೂ ಇಂದು ನಮ್ಮೊಂದಿಗೆ ಅನೇಕ ಜನಮಾಧ್ಯಮಗಳು ಹುಟ್ಟಿಕೊಂಡಿವೆ. ಈ ಮೂಲಕ ಪ್ರತಿರೋಧದ ಮಾಧ್ಯಮ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ಅವರು ತಿಳಿಸಿದರು.
ಗೌರಿ ನಂತರದ ಕಾಲಘಟ್ಟದಲ್ಲಿ ಸಿಎಎ-ಎನ್ಆರ್ಸಿ ವಿರುದ್ಧ ನಡೆದ ಹೋರಾಟ, ರೈತ ಹೋರಾಟ, 2023-24ರ ಚುನಾವಣಾ ಹೋರಾಟ, ಜೆನ್ಝೀ ಹೋರಾಟಗಳು ನಡೆದಿವೆ. ಗೌರಿ ಇದ್ದಿದ್ದರೆ ಈಗ ನಡೆಯುತ್ತಿರುವ ಜನವಿರೋಧಿ ಎಸ್ಐಆರ್ ವಿರುದ್ಧದ ಹೋರಾಟದಲ್ಲೂ ಭಾಗವಹಿಸುತ್ತಿದ್ದರು. ನಾವೆಲ್ಲರೂ ಹಿರಿಯ ಹೋರಾಟಗಾರರ ಆಶಯಗಳನ್ನು ಈಡೇರಿಸುವತ್ತಾ ಇನ್ನಷ್ಟು ಹೆಜ್ಜಗಳನ್ನು ಹಾಕಬೇಕು ಎಂದು ನೂರ್ ಶ್ರೀಧರ್ ನಮನ ಸಲ್ಲಿಸಿದರು.
ಈ ವೇಳೆಯಲ್ಲಿ ಗೌರಿ ಮೆಮೊರಿಯಲ್ ಟ್ರಸ್ಟ್ ನ ಪದಾಧಿಕಾರಿಗಳಾದ ಪ್ರೊ.ವಿ.ಎಸ್.ಶ್ರೀಧರ, ದೀಪು, ಹೋರಾಟಗಾರರಾದ ಕೆ.ಎಲ್.ಅಶೋಕ್, ಶಿವಸುಂದರ್, ಕುಮಾರ್ ಸಮತಳ, ಮಲ್ಲಿಗೆ, ವಿಜಯ್ ಸೀತಪ್ಪ, ಗೌರಿ, ಸರೋವರ್, ರವಿ ಮೋಹನ್, ಸುನೀಲ್ ಸಿರಸಂಗಿ, ರಾಜಲಕ್ಷ್ಮಿ ಅಂಕಲಗಿ ಸೇರಿದಂತೆ ಹಲವರು ಇದ್ದರು.