‘ಬೆಂಗಳೂರಿನಿಂದ ತುಘಲಕಾಬಾದ್’ | ಖಚಿತ ಸಾಗಣೆ ಸಮಯದ ಕಂಟೇನರ್ ರೈಲು ಸೇವೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ
ಬೆಂಗಳೂರು : ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಕಾನ್ಕೋರ್), ರೈಲ್ವೆ ಇಲಾಖೆಯ ಸಹಯೋಗದೊಂದಿಗೆ, ಬೆಂಗಳೂರಿನ ಇನ್ಲ್ಯಾಂಡ್ ಕಂಟೇನರ್ ಡಿಪೋ(ವೈಟ್ಫೀಲ್ಡ್) ನಿಂದ ಚೆನ್ನೈನ ಇನ್ಲ್ಯಾಂಡ್ ಕಂಟೇನರ್ ಡಿಪೋ(ತೊಂಡಿ ಯಾರ್ಪೇಟ್) ಮೂಲಕ ದಿಲ್ಲಿಯ ಇನ್ಲ್ಯಾಂಡ್ ಕಂಟೇನರ್ ಡಿಪೋ(ತುಘಲಕಾಬಾದ್)ಗೆ ದೇಶೀಯ ಸರಕುಗಳನ್ನು ಕಾನ್ಕೋರ್ ಒಡೆತನದ ಕಂಟೇನರ್ಗಳಲ್ಲಿ ಸಾಗಿಸುವ ‘ಖಚಿತ ಸಾಗಣೆ ಸಮಯದ’ ದೇಶೀಯ ಕಂಟೇನರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದರು.
ಶನಿವಾರ ನಗರದ ವೈಟ್ಫೀಲ್ಡ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಂಟೇನರ್ ಸೇವೆಯು ಪ್ರತಿ ಶನಿವಾರ ಇನ್ಲ್ಯಾಂಡ್ ಕಂಟೇನರ್ ಡಿಪೋ ವೈಟ್ಫೀಲ್ಡ್ನಿಂದ ಹೊರಡಲಿದ್ದು, ಇಲ್ಲಿನ ಕೈಗಾರಿಕೆಗಳು ಉತ್ತರ ಭಾರತಕ್ಕೆ ತಮ್ಮ ಸರಕುಗಳನ್ನು ತಲುಪಿಸಲು ನಿಗದಿತ ಮತ್ತು ಖಚಿತ ಸಮಯದ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.
ಖಚಿತ ಸಾಗಣೆ ಸಮಯದ ಕಂಟೇನರ್ ರೈಲು ಸೇವೆಯನ್ನು ಕಳೆದ ವರ್ಷ ತುಘಲಕಾಬಾದ್ ಮತ್ತು ಶಾಲಿಮಾರ್ ನಡುವೆ ಆರಂಭಿಸಲಾಗಿತ್ತು. ಇಂದು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಿನಿಂದ ದಿಲ್ಲಿಗೆ ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಖಚಿತ ಸಾಗಣೆ ಸಮಯದ ಸೇವೆಯು ತಮ್ಮ ಸರಕುಗಳು ತಲುಪುವ ಸಮಯದ ಕುರಿತು ಸ್ಪಷ್ಟತೆ ಒದಗಿಸುವ ಮೂಲಕ ಕೈಗಾರಿಕೆಗಳು ಮತ್ತು ಉತ್ಪಾದನಾ ವಲಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಸೋಮಣ್ಣ ತಿಳಿಸಿದರು.
ಈ ಸೇವೆಯು ಬೆಂಗಳೂರಿಗೆ ಮಾತ್ರವಲ್ಲದೆ ಹೊಸಕೋಟೆ, ವೈಟ್ಫೀಲ್ಡ್, ಮಾಲೂರು, ತುಮಕೂರು, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಆನೇಕಲ್, ಅತ್ತಿಬೆಲೆ, ದಾಬಸ್ಪೇಟೆ, ದೇವನಹಳ್ಳಿ, ಪೀಣ್ಯ, ನೆಲಮಂಗಲ, ಹಿರೇಹಳ್ಳಿ, ಕುಣಿಗಲ್, ಅಂತರಸನಹಳ್ಳಿ, ವಸಂತನರಸಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಪ್ರಮುಖ ಉತ್ಪಾದನಾ ಮತ್ತು ಕೈಗಾರಿಕಾ ಕೇಂದ್ರಗಳಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಸೋಮಣ್ಣ ಹೇಳಿದರು.
ಖಚಿತ ಸಾಗಣೆ ಸಮಯವು ಉದ್ಯಮಿಗಳು ಮತ್ತು ಕೈಗಾರಿಕೆಗಳಿಗೆ ದಾಸ್ತಾನು ನಿರ್ವಹಣೆ, ಉತ್ಪಾದನಾ ಯೋಜನೆ ಮತ್ತು ಪೂರೈಕೆ-ಸರಪಳಿಯ ದಕ್ಷತೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ ಮತ್ತು ಇದರಿಂದಾಗಿ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಅವರು ಹೇಳಿದರು.
ಈ ನಿಗದಿತ ಸೇವೆಯು ಒಟ್ಟು 166 ಗಂಟೆಗಳ ಖಚಿತ ಸಾಗಣೆ ಸಮಯವನ್ನು ಒದಗಿಸುತ್ತದೆ. ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಉತ್ಪಾದನಾ ಕೇಂದ್ರಗಳನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ ಗ್ರಾಹಕ ಜಾಲಗಳೊಂದಿಗೆ ನೇರವಾಗಿ ಸಂಪರ್ಕಿಸುವ ಮೂಲಕ, ಇದು ವಿಶ್ವಾಸಾರ್ಹ, ಮಿತವ್ಯಯಿ ಹಾಗೂ ಅತ್ಯಂತ ಕರಾರುವಕ್ಕಾದ ಮಲ್ಟಿಮೋಡಲ್ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ಸೋಮಣ್ಣ ತಿಳಿಸಿದರು.
ತುಮಕೂರಿನ ವಸಂತನರಸಾಪುರವು ಭಾರತದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದ್ದು, ದಕ್ಷಿಣ ಏಷ್ಯಾ ದಲ್ಲಿಯೇ ಅತಿ ದೊಡ್ಡ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದೇ ರೀತಿ ತಿಮ್ಮರಾಜನಹಳ್ಳಿಯಲ್ಲಿ ಕಂಟೇನರ್ ಟರ್ಮಿನಲ್ ನಿರ್ಮಾಣವಾದ ಬಳಿಕ, ತುಮಕೂರಿನಿಂದ ತುಘಲಕಾಬಾದ್ಗೆ ನೇರವಾಗಿ ಕಂಟೇನರ್ ರೈಲು ಸೇವೆಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ, ಬೆಂಗಳೂರಿನಿಂದ ಈ ಸೇವೆಯನ್ನು ಪ್ರಾರಂಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಸೇವೆಯಿಂದ ತಮ್ಮ ಸರಕುಗಳು ತಲುಪುವ ಖಚಿತ ಸಮಯದ ಬಗ್ಗೆ ಸ್ಪಷ್ಟತೆ ದೊರೆಯಲಿದ್ದು, ಈ ಪ್ರದೇಶದ ಹಲವಾರು ಕೈಗಾರಿಕೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು.