‘ಬಿಜೆಪಿ ಅವಧಿಯಲ್ಲಿ 15 ದಿನ ಸಾರಿಗೆ ಮುಷ್ಕರ ನಡೆದಿದ್ದನ್ನು ಮರೆತು ಬಿಟ್ಟಿರಾ?’ : ವಿಜಯೇಂದ್ರ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ
ಬೆಂಗಳೂರು : ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರಿಗೆ ಅರ್ಧ ವೇತನ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದನ್ನು ಮರೆತು ಬಿಟ್ಟಿರಾ?. ಆ ವೇಳೆಯೆ 15 ದಿನಗಳ ಸಾರಿಗೆ ಮುಷ್ಕರ ನಡೆದಿದ್ದು ಇತಿಹಾಸ. ಆ ಸಮಯದಲ್ಲಿ ಸಾವಿರಾರು ನೌಕರರನ್ನು ಸೇವೆಯಿಂದ ವಜಾ, ವರ್ಗಾವಣೆ, ನೌಕರರ ಮೇಲೆ ಪೊಲೀಸ್ ಕೇಸ್ಗಳನ್ನು ದಾಖಲಿಸಿರುವುದು ಬಿಜೆಪಿಯ ಹೆಗ್ಗಳಿಕೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ರಾಮಲಿಂಗಾರೆಡ್ಡಿ, ‘ವಿಜಯೇಂದ್ರ ಅವರೇ, ತುಂಬಾ ತಡವಾಗಿ ಎಚ್ಚೆತ್ತು ಕೊಂಡಿದ್ದೀರಾ. ತಮ್ಮ ಪಕ್ಷದ ಬಿಜೆಪಿಯ ಅವಧಿಯಲ್ಲಿ ಸಾರಿಗೆ ನೌಕರರ ಪಡಿಪಾಟಲು ಹೇಳತೀರದ್ದಾಗಿತ್ತು ಎಂಬುದು ಗೊತ್ತಿಲ್ಲದಿದ್ದರೆ ತಮ್ಮ ಪೂಜ್ಯ ತಂದೆಯವರನ್ನು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸ್ವಲ್ಪ ಕೇಳಿ, ಮಾಹಿತಿ ಪಡೆದುಕೊಂಡು ನಂತರ ಟ್ಟೀಟ್ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಟ್ವೀಟ್ ಮಾಡುವುದರಲ್ಲಿಯು ತಪ್ಪೇ ತಪ್ಪು, 38 ತಿಂಗಳ ವೇತನ ಬಾಕಿ ಅಲ್ಲ ರೀ, 38 ತಿಂಗಳ ವೇತನ ಪರಿಷ್ಕರಣೆ ಬಾಕಿ. ಇವೆರಡರ ವ್ಯತ್ಯಾಸವೂ ತಿಳಿಯದವರಿಂದ ನೈತಿಕತೆಯ ಪಾಠವೇ? ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಿಮ್ಮ ಸರಕಾರ ಹೊರತುಪಡಿಸಿ, ಹಿಂದಿನ ಎಲ್ಲ ಸರಕಾರಿ ಆದೇಶಗಳಲ್ಲಿಯೂ 2012-2016ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2012ರಿಂದ ಜಾರಿಗೆ ಬರುವುದಾಗಿ, 2016-2020ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2016ರಿಂದ ಜಾರಿಗೆ ಬರುವಂತೆ ಎಂದೇ ಸರಕಾರದ ಆದೇಶದಲ್ಲಿ ನಮೂದಾಗಿರುತ್ತದೆ.
ಆದರೆ 2023ರ ಆದೇಶದಲ್ಲಿ ಸರಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು, 2023ರ ಮಾರ್ಚ್ 17ರಲ್ಲಿ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್ 34(1ಟ ರನ್ವಯ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ನಮೂದಾಗಿದ್ದು, 2020ರಿಂದ ಜಾರಿಗೆ ಬರುವಂತೆ ಎಂದು ಸ್ವಷ್ಟವಾಗಿ ಆದೇಶದಲ್ಲಿ ತಿಳಿಸಿಲ್ಲದಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ನಿಮ್ಮ ಸರಕಾರವೇ ಸಾರಿಗೆ ನೌಕರರನ್ನು ಈ ಅತಂತ್ರ ಸ್ಥಿತಿಗೆ ತಳ್ಳಿರುವುದು. ನೀವೇ ಇದಕ್ಕೆಲ್ಲ ಕಾರಣಕರ್ತರು ಎಂದು ರಾಮಲಿಂಗಾರೆಡ್ಡಿ ದೂರಿದ್ದಾರೆ.
ಬಿಜೆಪಿ ಅಧಿಕಾರವಾಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ ನಾವು ಚಾಲನೆ ನೀಡಿದ್ದೇವೆ, 10ಸಾವಿರ ಹೊಸ ನೇಮಕಾತಿ, ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1ಸಾವಿರ ಮೃತ ಅವಲಂಬಿತರು ಇದ್ದಾರೆ. ಹೊಸ ಬಸ್ಸುಗಳ ಸೇರ್ಪಡೆ ಗಗನ ಕುಸುಮವಾಗಿದ್ದ ನಿಮ್ಮ ಅವಧಿಯಲ್ಲಿ, ನಾವು 5200 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ತಮ್ಮ ಕಾಲದ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಮೊತ್ತ ಪಾವತಿ ಬಾಕಿ ಪಾವತಿಗಾಗಿ 2ಸಾವಿರ ಕೋಟಿ ರೂ.ಹಣವನ್ನು ಬ್ಯಾಂಕ್ಗಳಿಂದ ಸಾಲ ಪಡೆಯಲು ಅವಕಾಶ ಕಲ್ಪಿಸಿ, ಅದರ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರಕಾರ ಮರುಪಾವತಿ ಮಾಡುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಯಿಂದ ನಿಗಮಗಳಿಗೆ ನಿಜಕ್ಕೂ ಆದಾಯ ಹೆಚ್ಚಳವಾಗಿದೆ, ಶೇ.65ರಷ್ಟು ಪ್ರಯಾಣಿಕರು ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ನಿಗಮಗಳನ್ನು ಸದೃಢಗೊಳಿಸಲು ನೆರವಾಗಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.