‘ಆತ್ಮಹತ್ಯೆ ತಡೆ’ಗೆ ರಾಜ್ಯದ 37 ಸರಕಾರಿ ಆಸ್ಪತ್ರೆಗಳಿಗೆ ‘ಉಷಸ್' ಯೋಜನೆ ವಿಸ್ತರಣೆ
ಬೆಂಗಳೂರು : ಆತ್ಮಹತ್ಯೆ ಅಥವಾ ಸ್ವಯಂ-ಹಾನಿಗೆ ಯತ್ನಿಸಿ ಬದುಕುಳಿದವರಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ನಿರಂತರ ಮಾನಸಿಕ ಹಾಗೂ ಸಾಮಾಜಿಕ ಆರೈಕೆ ಒದಗಿಸುವ ‘ಪ್ರಾಜೆಕ್ಟ್ ಉಷಸ್’ ಯೋಜನೆಯನ್ನು ರಾಜ್ಯದ 37ಸರಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ವೈ.ಸಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ನಗರದ ನಿಮ್ಹಾನ್ಸ್ ನ ಡಾ.ಎಂ.ವಿ.ಗೋವಿಂದಸ್ವಾಮಿ ಸಭಾಂಗಣದಲ್ಲಿ ‘ಆತ್ಮಹತ್ಯೆ ತಡೆ’ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಹಾಗೂ ಹಿಮಾಲಯ ವೆಲ್ನೆಸ್ ಕಂಪೆನಿ ಜಂಟಿಯಾಗಿ ಅನುಷ್ಠಾಗೊಳಿಸುತ್ತಿರುವ ಯೋಜನೆ ಸದ್ಯ 10 ಜಿಲ್ಲೆಗಳ 16 ಆಸ್ಪತ್ರೆಗಳಲ್ಲಿ ಜಾರಿಯಲ್ಲಿದ್ದು, ಇದೀಗ ರಾಜ್ಯದ 31 ಜಿಲ್ಲಾಸ್ಪತ್ರೆಗಳು ಹಾಗೂ ಬೆಂಗಳೂರಿನ ಆರು ಪ್ರಮುಖ ಸರಕಾರಿ ಆಸ್ಪತ್ರೆಗಳಿಗೆ ವಿಸ್ತರಣೆಯಾಗಲಿದೆ ಎಂದರು.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆ ಜಾರಿಯಲ್ಲಿರಲಿದೆ. ಆತ್ಮಹತ್ಯೆ ತಡೆಗೆ ಕೇವಲ ತುರ್ತು ಚಿಕಿತ್ಸೆ ನೀಡುವುದಷ್ಟೇ ಸಾಕಾಗುವುದಿಲ್ಲ. ಆತ್ಮಹತ್ಯೆಗೆ ಪ್ರಯತ್ನಿಸಿದ ಬಳಿಕದ ಅವಧಿಯಲ್ಲಿ ವ್ಯಕಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ಸಮಾಲೋಚನೆ, ಮಾನಸಿಕ ಆರೋಗ್ಯ ಸೇವೆ ಹಾಗೂ ಇತರ ನೆರವು ಒದಗಿಸುವ ವ್ಯವಸ್ಥೆ ಪರಿಣಾಮಕಾರಿ. ಆತ್ಮಹತ್ಯೆಗೆ ಒಮ್ಮೆ ಪ್ರಯತ್ನಿಸಿರುವುದು ಭವಿಷ್ಯದಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸುವ ಪ್ರಮುಖ ಮುನ್ಸೂಚಕವಾಗಿದೆ ಎಂದು ಅವರು ವಿವರಿಸಿದರು.
ಹೀಗಾಗಿ ತುರ್ತು ಚಿಕಿತ್ಸೆಯ ಬಳಿಕ ರೋಗಿ ಕೈಬಿಡದೆ, ಫಾಲೋಅಪ್ ಮೂಲಕ ನಿರಂತರವಾಗಿ ಬೆಂಬಲಿಸುವುದು ಉಷಸ್ ಯೋಜನೆಯ ಪ್ರಮುಖ ವಿಶೇಷತೆಯಾಗಿದೆ. ಸರಳವಾದ ಕೌನ್ಸೆಲಿಂಗ್ ಮತ್ತು ಅಗತ್ಯ ಸೇವೆಗಳಿಗೆ ರೆಫರಲ್ ವ್ಯವಸ್ಥೆಯಿಂದ ಆತ್ಮಹತ್ಯೆ ಮರುಪ್ರಯತ್ನದ ಪ್ರಮಾಣ ಶೇ.1.58ಕ್ಕೆ ಇಳಿಸಲು ಸಾಧ್ಯವಾಗಿದೆ. ಇಂತಹ ಪರಿಣಾಮಕಾರಿ ಮಾದರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದರಿಂದ ಹೆಚ್ಚಿನ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ಸಂಪನ್ಮೂಲ ನಿರ್ದೇಶಕ ಕೆ.ಜಿ.ಉಮೇಶ್ ಮಾತನಾಡಿ, ಯೋಜನೆಯಡಿ ತರಬೇತಿ ಪಡೆದ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ಸ್ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಗಳು ಆಸ್ಪತ್ರೆಯಲ್ಲೇ 45 ರಿಂದ 75 ನಿಮಿಷಗಳ ಸೈಕೋ-ಸೋಷಿಯಲ್ ಸೆಷನ್ ನಡೆಸಲಿದ್ದಾರೆ. ರೋಗಿಯ ಕುಟುಂಬದ ಸದಸ್ಯರನ್ನೂ ವಿಶ್ವಾಸಕ್ಕೆ ಪಡೆದು, ಡಿಸ್ಚಾರ್ಜ್ ಬಳಿಕ 12 ತಿಂಗಳ ಕಾಲ ನಿಗದಿತ ಫಾಲೋಅಪ್ ಕರೆಗಳ ಮೂಲಕ ಸಂಪರ್ಕದಲ್ಲಿರಲಿದ್ದಾರೆ. ಅಗತ್ಯವಿದ್ದಲ್ಲಿ ಹೆಚ್ಚಿನ ಮಾನಸಿಕ ಆರೋಗ್ಯ ಚಿಕಿತ್ಸೆಗೂ ವ್ಯವಸ್ಥೆ ಇರಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನ ಉಪನಿರ್ದೇಶಕಿ ಡಾ.ರಜನಿ ಪಾರ್ಥಸಾರಥಿ, ಕುಲಸಚಿವ ಹರ್ಷ ಎ.ಎಸ್, ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗ ಹೆಚ್ಚುವರಿ ಪ್ರಾಧ್ಯಾಪಕ ಡಾ.ಅನೀಶ್ ವಿ.ಚೆರಿಯನ್ ಸೇರಿದಂತೆ ಹಲವರು ಭಾಗವಹಿಸಿದ್ದರು.