ಬೆಂಗಳೂರು : ಪಡಿತರ ಚೀಟಿದಾರರ ಇ-ಕೆವೈಸಿ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಜನರನ್ನು ದಾರಿ ತಪ್ಪಿಸುವ ರಾಜಕೀಯ ಮಾಡುವ ಬದಲು, ಮೊದಲು ಕೇಂದ್ರ ಬಿಜೆಪಿ ಸರಕಾರ ಹೊರಡಿಸಿರುವ ಆದೇಶವನ್ನು ಓದಿಕೊಳ್ಳಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಶದ್ ತಿರುಗೇಟು ನೀಡಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಆದೇಶ ಕೇಂದ್ರ ಸರಕಾರದ್ದು, ನಿಯಮ ಕೇಂದ್ರ ಸರಕಾರದ್ದು, ಕಡ್ಡಾಯಗೊಳಿಸಿದ್ದು ಕೇಂದ್ರ ಸರಕಾರ; ಆದರೆ ಆರೋಪ ಮಾತ್ರ ರಾಜ್ಯ ಸರಕಾರದ ಮೇಲೆ’. ಇದಕ್ಕಿಂತ ದೊಡ್ಡ ದ್ವಿಮುಖ ರಾಜಕೀಯ ಇನ್ನೇನಿದೆ ಎಂದು ಪ್ರಶ್ನಿಸಿದ್ದಾರೆ.

2025ರ ಜು.22ರಂದು ಕೇಂದ್ರ ಸರಕಾರವೆ Targeted Public Distribution System (Control) Amendment Order’ ಹೊರಡಿಸಿ, ಪ್ರತಿ ಐದು ವರ್ಷಕ್ಕೊಮ್ಮೆ ಫಲಾನುಭವಿಗಳ ಇ-ಕೆವೈಸಿ ಮಾಡುವುದು ಕಡ್ಡಾಯ ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ. ಕೇಂದ್ರದ ನಿರ್ದೇಶನದಂತೆ ರಾಜ್ಯ ಸರಕಾರ ನಿಯಮಾನುಸಾರ ಇ-ಕೆವೈಸಿ ಪ್ರಕ್ರಿಯೆ ಕೈಗೊಂಡಿದೆ ಎಂದು ರಿಝ್ವಾನ್ ಅರ್ಶದ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಆದೇಶವನ್ನು ಓದದೆ ಅಥವಾ ಓದಿದರೂ ಮರೆಮಾಚಿ ರಾಜ್ಯ ಸರಕಾರದ ಮೇಲೆ ಆರೋಪ ಮಾಡುವುದು ಅಶೋಕ್ ಅವರ ರಾಜಕೀಯ ಅಜ್ಞಾನವೋ ಅಥವಾ ಉದ್ದೇಶಪೂರ್ವಕ ಸುಳ್ಳೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಜನರಿಗೆ ತೊಂದರೆ ನೀಡುವುದು ಯಾವುದೇ ಉದ್ದೇಶವಿಲ್ಲ. ಬದಲಾಗಿ, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಎನ್‍ಐಸಿ, ಕೆಎಸ್‍ಡಿಸಿ ಮತ್ತು ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಸರ್ವರ್‍ಗಳು, ಡೇಟಾಬೇಸ್ ಸರ್ವರ್ ನ ರ್ಯಾಮ್(ಆಚಿಣಚಿbಚಿse Seಡಿveಡಿ ಖಂಒ) ಸಾಮಥ್ರ್ಯ ಹೆಚ್ಚಳ ಹಾಗೂ ಲೋಡ್ ಟೆಸ್ಟಿಂಗ್‍ಗಾಗಿ ಪ್ರತ್ಯೇಕ ಅಪ್ಲಿಕೇಶನ್ ಸೇರಿದಂತೆ ತಾಂತ್ರಿಕ ಮೂಲಸೌಕರ್ಯವನ್ನು ಬಲಪಡಿಸುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ಜನರು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಇನ್ನೊಂದು ವಾರದೊಳಗೆ ಮೊಬೈಲ್‍ನಲ್ಲೇ ಫೇಸ್ ಅಥೆಂಟಿಕೇಷನ್ ‘(Database Server RAM’ ಮೂಲಕ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ. ಸಮಸ್ಯೆ ಬಂದಾಗ ಪರಿಹಾರ ಹುಡುಕುತ್ತಿರುವುದು ನಮ್ಮ ಸರಕಾರ, ಸಮಸ್ಯೆಯನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಬಿಜೆಪಿ ಎಂದು ಅವರು ಟೀಕಿಸಿದ್ದಾರೆ.

ಇ-ಕೆವೈಸಿ ಕಡ್ಡಾಯಗೊಳಿಸಿದ ಆದೇಶ ಹೊರಡಿಸಿದ್ದು ಯಾರು? ಕೇಂದ್ರವೋ, ರಾಜ್ಯವೋ? ಪ್ರತಿ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಮಾಡಬೇಕು ಎಂದು ಹೇಳಿದ್ದು ಯಾರು? ಆ ನಿಯಮವನ್ನು ದೇಶಾದ್ಯಂತ ಜಾರಿಗೆ ತಂದಿದ್ದು ಯಾರು? ಈ ಮೂರು ಪ್ರಶ್ನೆಗಳಿಗೆ ಅಶೋಕ್ ಮೊದಲು ಉತ್ತರಿಸಬೇಕು ಎಂದು ರಿಝ್ವಾನ್ ಅರ್ಶದ್ ಆಗ್ರಹಿಸಿದ್ದಾರೆ.

ಕೇಂದ್ರದ ಆದೇಶಕ್ಕೆ ರಾಜ್ಯ ಸರಕಾರವನ್ನು ಹೊಣೆ ಮಾಡುವುದು ಬಿಜೆಪಿಯ ಹಳೆಯ ‘ಸುಳ್ಳು ಹೇಳು, ಗೊಂದಲ ಸೃಷ್ಟಿಸು, ಜನರನ್ನು ದಾರಿ ತಪ್ಪಿಸು’ ರಾಜಕೀಯದ ಮುಂದುವರಿದ ಭಾಗವಷ್ಟೇ ಎಂದು ಟೀಕಿಸಿರುವ ಅವರು, ಪಡಿತರ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಜನರ ಹಕ್ಕಿನೊಂದಿಗೆ ಆಟವಾಡಬೇಡಿ. ಕೇಂದ್ರದ ಆದೇಶದ ಸತ್ಯವನ್ನು ಜನರ ಮುಂದೆ ಒಪ್ಪಿಕೊಳ್ಳಿ; ರಾಜ್ಯ ಸರಕಾರ ಕೈಗೊಂಡಿರುವ ಪರಿಹಾರ ಕ್ರಮಗಳನ್ನೂ ಜನರಿಗೆ ತಿಳಿಸಿ ಎಂದು ತಿರುಗೇಟು ನೀಡಿದ್ದಾರೆ.

ನಮ್ಮ ಸರಕಾರಕ್ಕೆ ರಾಜಕೀಯಕ್ಕಿಂತ ಜನರ ಹಿತವೇ ಮುಖ್ಯ. ಅರ್ಹ ಫಲಾನುಭವಿಗಳಿಗೆ ಪಡಿತರ ಸೌಲಭ್ಯದಲ್ಲಿ ಯಾವುದೇ ಅನಗತ್ಯ ತೊಂದರೆ ಉಂಟಾಗದಂತೆ ಸರಕಾರ ಬದ್ಧವಾಗಿದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor