Bengaluru | 3 ಸಾವಿರ ಉರ್ದು ಶಿಕ್ಷಕರ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಬೆಂಗಳೂರು : ಪ್ರಸ್ತುತ ಹದಿನೈದು ಸಾವಿರ ಶಿಕ್ಷಕರ ನೇಮಕಾತಿಯಲ್ಲಿಯೇ 3ಸಾವಿರ ಉರ್ದು ಶಿಕ್ಷಕರ ಹುದ್ದೆಗಳನ್ನು ಸೇರಿಸಿ ಭರ್ತಿ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಉಮ್ಮತಿ ಫೌಂಡೇಷನ್, ಕರ್ನಾಟಕ ತೆಹ್ರೀಕ್-ಎ-ಇನ್ಸಾಫ್ ಹಾಗೂ ಹಿಂದೂಸ್ಥಾನಿ ಉರ್ದು ಮಂಚ್ ಸಹಯೋಗದೊಂದಿಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲಾಯಿತು.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಆ.12ರ ಗೆಜೆಟ್ ಅಧಿಸೂಚನೆಯನ್ನು ಮರುಪರಿಶೀಲಿಸಿ ಸೂಕ್ತವಾಗಿ ಮಾರ್ಪಡಿಸಬೇಕು. ಶಾಲೆಗಳಲ್ಲಿ ವಾಸ್ತವಿಕ ಖಾಲಿ ಹುದ್ದೆಗಳ ಆಧಾರದ ಮೇಲೆ, ಉರ್ದು ಮಾಧ್ಯಮದ ಪಿಎಸ್ಟಿ, ಜಿಪಿಟಿ ಮತ್ತು ಎಚ್ಎಸ್ಟಿಆರ್ / ಸಹಾಯಕ ಶಿಕ್ಷಕರ ಅಗತ್ಯ ಸಂಖ್ಯೆಯ ಹುದ್ದೆಗಳನ್ನು ಸೇರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ನೇಮಕಾತಿಯನ್ನು ಅಂತಿಮಗೊಳಿಸುವ ಮೊದಲು ಕರ್ನಾಟಕಾದ್ಯಂತ ಉರ್ದು ಮಾಧ್ಯಮದ ಖಾಲಿ ಬೋಧಕ ಹುದ್ದೆಗಳ ಹೊಸ ಮೌಲ್ಯಮಾಪನವನ್ನು ನಡೆಸಬೇಕು. ಶಿಕ್ಷಕರ ನೇಮಕಾತಿ ಅವಕಾಶವನ್ನು ಮುಖ್ಯವಾಗಿ ಕನ್ನಡ ಮಾಧ್ಯಮಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕನ್ನಡ ಮತ್ತು ಇತರ ಅರ್ಹ ಮಾಧ್ಯಮಗಳ ಜೊತೆಗೆ ಉರ್ದು ಮಾಧ್ಯಮದ ಹುದ್ದೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ದೀರ್ಘಕಾಲದವರೆಗೆ ಬಾಕಿ ಉಳಿದಿರುವ ಉರ್ದು ಮಾಧ್ಯಮದ ಖಾಲಿ ಹುದ್ದೆಗಳನ್ನು ನಿಯಮಿತ, ಖಾಯಂ ಶಿಕ್ಷಕರ ಮೂಲಕ ಭರ್ತಿ ಮಾಡಬೇಕು. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾಗಿ ಮತ್ತು ಹಲವು ವರ್ಷಗಳಿಂದ ಸಿಇಟಿ ನೇಮಕಾತಿಗಾಗಿ ತಯಾರಿ ನಡೆಸುತ್ತಿರುವ ಅರ್ಹ ಉರ್ದು ಮಾಧ್ಯಮ ಅಭ್ಯರ್ಥಿಗಳಿಗೆ ಪ್ರಸ್ತುತ ನೇಮಕಾತಿಯಲ್ಲಿ ನ್ಯಾಯಯುತ ಅವಕಾಶ ಸಿಗುವುದನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ಪ್ರಕ್ರಿಯೆಯು ಸಮಾನ ಉದ್ಯೋಗದ ತತ್ವಗಳನ್ನು ಹಾಗೂ ಭಾಷಾ ಅಲ್ಪಸಂಖ್ಯಾತರ ಶೈಕ್ಷಣಿಕ ಹಿತಾಸಕ್ತಿಗಳು ಮತ್ತು ಹಕ್ಕುಗಳನ್ನು ಗೌರವಿಸುವುದನ್ನು ಖಚಿತಪಡಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ರಾಜ್ಯದಲ್ಲಿ 3,947 ಉರ್ದು ಮಾಧ್ಯಮ ಶಾಲೆಗಳಿವೆ. ಸುಮಾರು 2,73,573 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಾಥಮಿಕ ಶಾಲಾ ಮಟ್ಟದಲ್ಲಿ 4,142 ಹುದ್ದೆಗಳು, ಪ್ರೌಢಶಾಲಾ ಮಟ್ಟದಲ್ಲಿ 610 ಹುದ್ದೆಗಳು ಖಾಲಿ ಇದ್ದು ಸರಕಾರ ಕೂಡಲೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಅಧ್ಯಕ್ಷ ಮುಹಮ್ಮದ್ ನಾಸೀರ್, ಉಮ್ಮತಿ ಫೌಂಡೇಷನ್ ಅಧ್ಯಕ್ಷ ಝಮೀರ್ ಅಹ್ಮದ್, ಉರ್ದು ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆ ಝೈಬಾ, ಉರ್ದು ಶಿಕ್ಷಕ ಹುದ್ದೆ ಆಕಾಂಕ್ಷಿ ನೂರ್ ಜಹಾನ್ ಮತ್ತಿತರರು ಹಾಜರಿದ್ದರು.