ಬೆಂಗಳೂರು | ಅಗ್ನಿ ಅವಘಡ : 2 ಕೋಟಿ ರೂ. ಮೌಲ್ಯದ ಬಟ್ಟೆ, ಕಾರು, ಬೈಕ್‌ಗಳು ಬೆಂಕಿಗಾಹುತಿ

Update: 2024-04-24 12:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು : ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರೋಡ್‍ನಲ್ಲಿರುವ ಟಿಂಬರ್ ಯಾರ್ಡ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 2 ಕೋಟಿ ರೂ. ಮೌಲ್ಯದ ಬಟ್ಟೆಗಳು, ಕಾರುಗಳು ಹಾಗೂ 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ.

ಎ.23ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಘಟನೆ ನಡೆಸಿದ್ದು, ಬೆಂಕಿ ಅವಘಡದಿಂದ ಕಾರ್ ವಾಶ್ ಸರ್ವಿಸ್‍ನಲ್ಲಿದ್ದ 2 ಕಾರುಗಳು, ಗ್ಯಾರೇಜ್‍ನಲ್ಲಿದ್ದ 1 ಬಿಎಂಡಬ್ಲ್ಯೂ ಕಾರು, 1 ಟಾಟಾ ಏಸ್ ವಾಹನ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದ್ವಿಚಕ್ರಗಳು ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೆಂಕಿ ತಗುಲಿ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಮರದ ಪೀಸ್‍ಗಳನ್ನು ಇಟ್ಟಿದ್ದ ಟಿಂಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ, ಲೋವಬಲ್ ಸ್ಪೋರ್ಟ್ ಹೆಸರಿನ ಗಾರ್ಮೆಂಟ್ಸ್ ಕಟ್ಟಡ, ವಾಹನ ವಾಶ್ ಕೇಂದ್ರಕ್ಕೂ ಬೆಂಕಿಯ ಜ್ವಾಲೆ ಹಬ್ಬಿದೆ. ಜತೆಗೆ, ಬಲಭಾಗದಲ್ಲಿದ್ದ ಗ್ಯಾರೇಜ್‍ಗೂ ಬೆಂಕಿ ಹಬ್ಬಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಏಳು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಿವೆ. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News