Bengaluru | ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಹೃದಯಾಘಾತವೆಂದು ಬಿಂಬಿಸಿ ನಾಟಕವಾಡಿದ್ದ ಪತ್ನಿ ಸೇರಿದಂತೆ ಮೂವರನ್ನು ಅವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿತ್ತಗನೂರಿನ ಯಲ್ಲಪ ಗಾರ್ಡನ್ ನಿವಾಸಿ ಮುಬಾರಕ್ ಎಂಬುವವರ ಪತ್ನಿ ಶಾಹಿನಾ ಬಾನು, ಈಕೆಯ ತಾಯಿ ಹಸೀನಾ ಹಾಗೂ ಪ್ರಿಯಕರ ನಹೀಮ್ ಉದ್ದೀನ್ ಖುರೇಶಿ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
20 ವರ್ಷದ ಹಿಂದೆ ಮುಬಾರಕ್ ಎಂಬುವವರನ್ನು ಶಾಹಿನಾ ಬಾನು ವಿವಾಹವಾಗಿದ್ದು, ಅವರಿಗೆ ಒಬ್ಬ ಮಗಳಿದ್ದಾಳೆ. ಕಳೆದ ಎರಡು ವರ್ಷಗಳಿಂದ ಮುಬಾರಕ್ ಅವರು ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಈ ನಡುವೆ ಮಗಳು ಸಹ ಅನಾರೋಗ್ಯಕ್ಕೀಡಾಗಿದ್ದಳು ಎನ್ನಲಾಗಿದೆ.
ಮಗಳ ಖಾಯಿಲೆಯನ್ನು ಗುಣಪಡಿಸುವುದಾಗಿ ನಹೀಮ್ ಉದ್ದೀನ್ ಖುರೇಶಿ ಎಂಬಾತ ಆಗಾಗ್ಗೆ ಮನೆಗೆ ಬರುತ್ತಿದ್ದನು. ಆ ಸಂದರ್ಭದಲ್ಲಿ ಈತನೊಂದಿಗೆ ಶಾಹಿನಾ ಬಾನು ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ದಿನ ಕಳೆದಂತೆ ನಹೀಮ್ ಜೊತೆ ಶಾಹಿನಾಗೆ ಸ್ನೇಹವಾಗಿ ಇಬ್ಬರು ಪ್ರೀತಿಸುತ್ತಿದ್ದು, ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಕಳೆದ ಸೆ.9 ರಂದು ಹಾಸಿಗೆ ಹಿಡಿದಿದ್ದ ಮುಬಾರಕ್ಕನನ್ನು ಕೊಲೆ ಮಾಡಲು ಸಂಚು ರೂಪಿಸಿ ತಾಯಿ-ಮಗಳು ಸೇರಿಕೊಂಡು ಮಲಗಿದ್ದ ಮುಬಾರಕ್ ಅವರನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿದ್ದಲ್ಲದೇ ಖಾಸಗಿ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಹೃದಯಾಘಾತದಿಂದ ಮುಬಾರಕ್ ಮೃತಪಟ್ಟಿದ್ದಾರೆಂದು ತಾಯಿ, ಮಗಳು ನಾಟಕವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.