ಬೆಂಗಳೂರು : ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ಕಮಾಂಡ್‍ನ ಕಮಾಂಡರ್‌ ಗಳ ಸಮ್ಮೇಳನ-2026 ಬೆಂಗಳೂರಿನಲ್ಲಿರುವ ತರಬೇತಿ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಸೆ.10ರಿಂದ 12ರವರೆಗೆ ನಡೆಯಿತು.

ತರಬೇತಿ ಕಮಾಂಡ್‍ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಎಸ್. ಶ್ರೀನಿವಾಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕಮಾಂಡ್ ವ್ಯಾಪ್ತಿಯ ಎಲ್ಲ ತರಬೇತಿ ಸಂಸ್ಥೆಗಳ ಕಮಾಂಡರ್‌ ಗಳು ಹಾಗೂ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಹೆಚ್ಚುತ್ತಿರುವ ಸಂಕೀರ್ಣ ಕಾರ್ಯಾಚರಣಾ ಪರಿಸರದಲ್ಲಿ ಭಾರತೀಯ ವಾಯುಪಡೆಯ ಸಾಮಥ್ರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ತರಬೇತಿ ಕ್ಷೇತ್ರವನ್ನು ಕಾರ್ಯತಂತ್ರದ ಉದ್ದೇಶಗಳೊಂದಿಗೆ ಹೊಂದಾಣಿಕೆಗೊಳಿಸುವ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಭಾರತೀಯ ವಾಯುಪಡೆಯ ಭವಿಷ್ಯದ ಖರೀದಿ ಯೋಜನೆ ಹಾಗೂ ಅಗ್ನಿವೀರವಾಯುಗಳ ಸೇರ್ಪಡೆಗೆ ಸಂಬಂಧಿಸಿದ ನೀತಿ ನವೀಕರಣ ಕುರಿತಂತೆ ವಿಶೇಷ ಉಪನ್ಯಾಸಗಳನ್ನೂ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ ತರಬೇತಿ ಕಮಾಂಡ್ ಪ್ರಧಾನ ಕಚೇರಿಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ತಮ್ಮ ಕ್ಷೇತ್ರಗಳ ಸಮಗ್ರ ಪರಿಶೀಲನಾ ವರದಿಗಳನ್ನು ಮಂಡಿಸಿದರು. ತರಬೇತಿ ಉದ್ದೇಶಗಳನ್ನು ಸಾಧಿಸುವಲ್ಲಿ ಎದುರಾದ ಸವಾಲುಗಳು ಹಾಗೂ ಅವುಗಳನ್ನು ನಿವಾರಿಸಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏರ್ ಮಾರ್ಷಲ್ ಎಸ್.ಶ್ರೀನಿವಾಸ್, ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವಲ್ಲಿ ಪರಿವರ್ತನಾತ್ಮಕ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು. ವಿವಿಧ ತರಬೇತಿ ಸಂಸ್ಥೆಗಳು ಸಾಧಿಸಿರುವ ಶ್ರೇಷ್ಠತೆಯನ್ನು ಅವರು ಶ್ಲಾಘಿಸಿದರು.

ಸಮ್ಮೇಳನದ ಅಂಗವಾಗಿ ಕಾರ್ಯಾಚರಣೆ, ನಿರ್ವಹಣೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಾಯುಪಡೆ ಕೇಂದ್ರಗಳಿಗೆ ಎಸ್.ಶ್ರೀನಿವಾಸ್ ಟ್ರೋಫಿಗಳನ್ನು ಪ್ರದಾನ ಮಾಡಿದರು. ‘ಪ್ರೈಡ್ ಆಫ್ ದಿ ಟ್ರೈನಿಂಗ್ ಕಮಾಂಡ್’ ಪ್ರತಿಷ್ಠಿತ ಟ್ರೋಫಿಯು ಯಲಹಂಕ ವಾಯುಪಡೆ ಕೇಂದ್ರಕ್ಕೆ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor