Bengaluru | 8,136 ಲೀಟರ್ ನಕಲಿ ನಂದಿನಿ ತುಪ್ಪ ವಶಕ್ಕೆ; ನಾಲ್ವರ ಬಂಧನ
ಸಾಂದರ್ಭಿಕ ಚಿತ್ರ | ನಂದಿನಿ ತುಪ್ಪ
ಬೆಂಗಳೂರು : ಕರ್ನಾಟಕ ರಾಜ್ಯದ ಹೆಮ್ಮೆಯ ನಂದಿನಿ ತುಪ್ಪವನ್ನು ನಕಲಿ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿರುವ ಸಿಸಿಬಿ ಪೊಲೀಸರು, ನಾಲ್ವರನ್ನು ಬಂಧಿಸಿ 8,136 ಲೀಟರ್ ನಂದಿನಿ ಬ್ರಾಂಡ್ನ ಕಲಬೆರೆಕೆ ತುಪ್ಪ ಹಾಗೂ ಸರಬರಾಜು ಮಾಡುತ್ತಿದ್ದ 4 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳನ್ನು ದೀಪಕ್, ಮುನಿರಾಜು, ಅಭಿ ಅರಸು, ಮಹೇಂದ್ರ ಎಂದು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಹೊರ ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ತಯಾರಿಸಿ ನಂದಿನಿ ಮಾದರಿಯಲ್ಲಿಯೇ ರೂಪ ನೀಡಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಬೆಂಗಳೂರು ನಗರದಾದ್ಯಂತ ಮಾರಾಟ ಮಾಡುತ್ತಿದ್ದರು. ಅದರಲ್ಲೂ, ಕೆಎಂಎಫ್ ಕಡೆಯಿಂದ ಅಧಿಕೃತ ಪರವಾನಗಿಯನ್ನು ಪಡೆದಂತಹ ಬೆಂಗಳೂರಿನ ವ್ಯಾಪಾರಿಗಳಿಗೆ ಸರಬರಾಜು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಗಳು ಕಲಬೆರೆಕೆ ನಂದಿನಿ ತುಪ್ಪದ ಬಾಟಲಿಗಳನ್ನು ಅಸಲಿಯೆಂದು ಬಿಂಬಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆಎಂಎಫ್ ಜಾಗೃತ ದಳದ ಅಧಿಕಾರಿಗಳು ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದ ಕೃಷ್ಣ ಎಂಟರ್ ಪ್ರೈ. ಮಾಲಕ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಗೋದಾಮುಗಳ ಮೇಲೆ ದಾಳಿ ನಡೆಸಿದ್ದರು.
ದಾಳಿಯ ವೇಳೆ ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ನಂದಿನಿ ಬ್ರಾಂಡ್ನ ಸ್ಯಾಚೆಟ್ಗಳಿಗೆ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಬೆಂಗಳೂರಿನ ಅಂಗಡಿಗಳಿಗೆ ಸಾಗಿಸುತ್ತಿದ್ದ ವಾಹನ ಚಾಲಕ ಮತ್ತು ಆತನು ಉಪಯೋಗಿಸುತ್ತಿದ್ದ ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್ಗಳು, 60 ಲಕ್ಷ ರೂ. ಮಾಲ್ಯದ 4 ವಾಹನಗಳು, ಕೃತ್ಯದಿಂದ ಸಂಪಾದಿಸಿದ 1,19,640 ರೂ., ನಗದು, 56,95,200 ರೂ. ಬೆಲೆ ಬಾಳುವ 8,136 ಲೀಟರ್ ಕಲಬೆರಕೆಯ ತುಪ್ಪ ತುಂಬಿದ ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್ನ ಬಾಟಲಿಗಳು, ತೆಂಗು ಮತ್ತು ಪಾಮ್ ಎಣ್ಣೆ ತುಂಬಿದ ಕ್ಯಾನುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.